ನವದೆಹಲಿ: ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮೂಲಸೌಕರ್ಯ ವಲಯದ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಭಾರತವು ಇಂದು ಕೇವಲ ರಸ್ತೆ-ರೈಲ್ವೆಗಳನ್ನು ನಿರ್ಮಿಸುತ್ತಿಲ್ಲ, ಬದಲಾಗಿ ದೇಶದ ಭವಿಷ್ಯತ್ತನ್ನು ನಿರ್ಮಿಸುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ನವದೆಹಲಿಯ ಪ್ರತಿಷ್ಠಿತ ಅಶೋಕ್ ಹೋಟೆಲ್ನಲ್ಲಿ ಇಂದು ನಡೆದ ‘Build India Infra Awards – 2026’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ವಿಕಸಿತ ಭಾರತದತ್ತ ದಾಪುಗಾಲು
2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸ್ಮರಿಸಿದ ಸಚಿವರು, ಮೂಲಸೌಕರ್ಯ ವಲಯದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಶ್ಲಾಘಿಸಿದರು.
ಶ್ರೇಷ್ಠತೆಗೆ ಮನ್ನಣೆ: ರಸ್ತೆ ಸಾರಿಗೆ, ರೈಲ್ವೆ, ವಾಯುಯಾನ, ಬಂದರುಗಳು, ನಗರಾಭಿವೃದ್ಧಿ, ಜಲ ಮೂಲಸೌಕರ್ಯ ಮತ್ತು ವಿದ್ಯುತ್ ಸೇರಿದಂತೆ ನಿರ್ಣಾಯಕ ವಲಯಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಬಿಲ್ಡ್ ಇಂಡಿಯಾ ಫೌಂಡೇಶನ್ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭವಿಷ್ಯದ ಭರವಸೆ: “ಭಾರತ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿಲ್ಲ, ಬದಲಾಗಿ ಭಾರತದ ಭವಿಷ್ಯತ್ತನ್ನು ನಿರ್ಮಿಸುತ್ತಿದೆ ಎನ್ನುವ ಪ್ರಧಾನಿಯವರ ಮಾತು ಇಂದು ಅಕ್ಷರಶಃ ಸಾಬೀತಾಗುತ್ತಿದೆ,” ಎಂದು ಸೋಮಣ್ಣ ಅವರು ಪ್ರತಿಪಾದಿಸಿದರು.
ರಾಷ್ಟ್ರ ನಿರ್ಮಾಣದ ಶಿಲ್ಪಿಗಳಿಗೆ ಕೃತಜ್ಞತೆ
ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಸಚಿವರು, ತೆರೆಯ ಮರೆಯಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಎಂಜಿನಿಯರ್ಗಳು, ಕಾರ್ಮಿಕರು ಮತ್ತು ಉದ್ಯಮಿಗಳಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಿದರು. ಆಧುನಿಕ ಮೂಲಸೌಕರ್ಯಗಳು ಸಾಮಾನ್ಯ ಜನರ ಬದುಕನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಲ್ಡ್ ಇಂಡಿಯಾ ಫೌಂಡೇಶನ್ನ ಪದಾಧಿಕಾರಿಗಳು, ಮೂಲಸೌಕರ್ಯ ವಲಯದ ಗಣ್ಯರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.









