ತಿರುವನಂತಪುರಂ (ಕೇರಳ): ಕೇರಳದ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನೇಮಮ್ನಲ್ಲಿ ಎನ್ಡಿಎ ಪರವಾಗಿ ಜನಬೆಂಬಲದ ಅಲೆ ಎದ್ದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರದ ಅಂಗವಾಗಿ ನೇಮಮ್ನಲ್ಲಿ ಇಂದು SNDP (ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ) ನಾಯಕರು ಹಾಗೂ ಮತದಾರರೊಂದಿಗೆ ಅವರು ಮಹತ್ವದ ಸಂವಾದ ನಡೆಸಿದರು.
ರಾಜೀವ್ ಚಂದ್ರಶೇಖರ್ ಪರ ಭರ್ಜರಿ ಪ್ರಚಾರ:
ಕೇರಳ ಬಿಜೆಪಿ ಘಟಕದ ಅಧ್ಯಕ್ಷರು ಹಾಗೂ ಎನ್ಡಿಎ ಅಭ್ಯರ್ಥಿಯಾಗಿರುವ ರಾಜೀವ್ ಚಂದ್ರಶೇಖರ್ ಅವರ ಪರವಾಗಿ ಮತಯಾಚಿಸಿದ ಶೋಭಾ ಕರಂದ್ಲಾಜೆ, “ತಿರುವನಂತಪುರದಾದ್ಯಂತ ರಾಜೀವ್ ಚಂದ್ರಶೇಖರ್ ಅವರಿಗೆ ಜನಸಾಮಾನ್ಯರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ತಿರುವನಂತಪುರಂನಲ್ಲಿ ಬಿಜೆಪಿ ಇತಿಹಾಸ ನಿರ್ಮಿಸುವುದು ನಿಶ್ಚಿತ” ಎಂದು ತಿಳಿಸಿದರು.
ಡಬಲ್ ಎಂಜಿನ್ ಸರ್ಕಾರದ ಆಶಯ:
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. “ಕೇರಳದ ಜನತೆ ಈಗ ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದ ಸರ್ವತೋಮುಖ ಏಳಿಗೆಗಾಗಿ ಕೇರಳದಲ್ಲೂ ಡಬಲ್ ಎಂಜಿನ್ ಸರ್ಕಾರ ಬರಬೇಕೆಂದು ಜನರು ಆಶಿಸುತ್ತಿದ್ದಾರೆ. ವಿಕಸಿತ ಕೇರಳ ಮತ್ತು ಸುರಕ್ಷಿತ ಕೇರಳ ನಿರ್ಮಾಣಕ್ಕೆ ಎನ್ಡಿಎ ಮಾತ್ರವೇ ಸ್ಪಷ್ಟ ಆಯ್ಕೆಯಾಗಿದೆ” ಎಂದು ಅವರು ಹೇಳಿದರು.
ಮತದಾರರ ಸ್ಪಂದನೆ:
SNDP ನಾಯಕರೊಂದಿಗೆ ನಡೆದ ಸಂವಾದದಲ್ಲಿ ಸಮುದಾಯದ ಪ್ರಮುಖ ಬೇಡಿಕೆಗಳು ಹಾಗೂ ಕೇರಳದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಸ್ಥಳೀಯ ಮತದಾರರ ಅಗಾಧ ಪ್ರತಿಕ್ರಿಯೆಯು ಈ ಬಾರಿ ಕೇರಳ ರಾಜಕೀಯದಲ್ಲಿ ಹೊಸ ದಿಕ್ಸೂಚಿ ಮೂಡಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಚಾರದ ವೇಳೆ ಕೇರಳ ಬಿಜೆಪಿ ಘಟಕದ ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.








