ನವದೆಹಲಿ: ಉತ್ತರ ಭಾರತ ಪ್ರವಾಸ ಕೈಗೊಂಡಿರುವ ಮಂಡ್ಯ ತಾಲೂಕಿನ ಮಂಗಳ ಗ್ರಾಮದ ರೈತ ಕುಟುಂಬಗಳಿಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ದೆಹಲಿ ನಿವಾಸದಲ್ಲಿ ಆತ್ಮೀಯ ಆತಿಥ್ಯ ನೀಡಿದರು.
ಮಂಗಳ ಗ್ರಾಮದ ಸುಮಾರು 48ಕ್ಕೂ ಹೆಚ್ಚು ರೈತ ಕುಟುಂಬಗಳು ತೀರ್ಥಯಾತ್ರೆ ಹಾಗೂ ಪ್ರವಾಸದ ಅಂಗವಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ರೈತರೊಂದಿಗೆ ಸಂವಾದ
ತಮ್ಮನ್ನು ಭೇಟಿ ಮಾಡಲು ಬಂದ ರೈತರೊಂದಿಗೆ ಸಚಿವರು ಅತ್ಯಂತ ಆಪ್ತವಾಗಿ ಸಂವನ ನಡೆಸಿದರು. ಪ್ರವಾಸದ ಅನುಭವಗಳು, ಉತ್ತರ ಭಾರತದ ಹವಾಮಾನ ಮತ್ತು ಅಲ್ಲಿನ ಪ್ರದೇಶಗಳ ಬಗ್ಗೆ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ಮಂಡ್ಯ ಭಾಗದ ಕೃಷಿ ಚಟುವಟಿಕೆಗಳು, ಬೆಳೆಗಳ ಪರಿಸ್ಥಿತಿ ಮತ್ತು ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡರು.
ಸುಖಕರ ಪ್ರಯಾಣಕ್ಕೆ ಹಾರೈಕೆ
ರೈತರ ಭೇಟಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಅವರು, “ನನ್ನ ಮಣ್ಣಿನ ರೈತರು ದೆಹಲಿಯ ನಿವಾಸಕ್ಕೆ ಆಗಮಿಸಿ ಪ್ರೀತಿಪೂರ್ವಕವಾಗಿ ಆತಿಥ್ಯ ಸ್ವೀಕರಿಸಿದ್ದು ನನಗೆ ಅಪಾರ ಸಂತಸ ತಂದಿದೆ. ಅವರು ತೋರಿದ ವಾತ್ಸಲ್ಯಪೂರ್ಣ ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ. ಅವರ ಮುಂದಿನ ಪ್ರವಾಸ ಸುಖಕರವಾಗಿರಲಿ,” ಎಂದು ಹಾರೈಸಿದ್ದಾರೆ.
ಮಂಡ್ಯದ ರೈತರು ದೆಹಲಿಗೆ ಬಂದಾಗ ತಮ್ಮದೇ ಹಿರಿಯ ನಾಯಕನ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದು, ರೈತರಲ್ಲಿ ಹರ್ಷ ಮೂಡಿಸಿತ್ತು. ಔತಣದ ನಂತರ ಸಚಿವರು ರೈತ ಕುಟುಂಬಗಳೊಂದಿಗೆ ಫೋಟೋ ತೆಗೆಸಿಕೊಂಡು, ಪ್ರೀತಿಯಿಂದ ಬಿಳ್ಕೊಟ್ಟರು.









