ಪುದುಚೇರಿ: ಪುದುಚೇರಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ‘ಇಂಡಿಯಾ’ (INDIA) ಮೈತ್ರಿಕೂಟದ ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಅದರ ಪ್ರಮುಖ ಆಂಶಗಳ ಕುರಿತು ಕಾಂಗ್ರೆಸ್ ನಾಯಕ ಹಾಗೂ ಪುದುಚೇರಿ ಉಸ್ತುವಾರಿಗಳಾದ ಶ್ರೀ ದಿನೇಶ್ ಗುಂಡೂರಾವ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು.
ಪುದುಚೇರಿಯ ಪ್ರತಿಯೊಂದು ಕುಟುಂಬದ ಆರ್ಥಿಕ ಸಬಲೀಕರಣ, ಯುವಜನತೆ ಮತ್ತು ಮಹಿಳೆಯರ ಉನ್ನತಿಯೇ ಈ ಪ್ರಣಾಳಿಕೆಯ ಮೂಲ ಮಂತ್ರವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಣಾಳಿಕೆಯ ಪ್ರಮುಖ ಭರವಸೆಗಳು: ಸುದ್ದಿಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಅವರು ಘೋಷಿಸಿದ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ:
ಮಹಿಳಾ ಸಬಲೀಕರಣ: ಪ್ರತಿ ಮನೆಯ ಯಜಮಾನಿಗೆ ಮಾಸಿಕ 5,000/- ರೂ. ಆರ್ಥಿಕ ನೆರವು ಹಾಗೂ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ.
ಯುವಜನತೆಗೆ ಆಸರೆ: ಪದವೀಧರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೆ ಪ್ರತಿ ತಿಂಗಳು 2,000/- ರೂ. ನಿರುದ್ಯೋಗ ಭತ್ಯೆ.
ಉದ್ಯೋಗ ಸೃಷ್ಟಿ: ಪುದುಚೇರಿಯಲ್ಲಿ 30,000 ಹೊಸ ಉದ್ಯೋಗಗಳ ಸೃಷ್ಟಿ. ಇದರಲ್ಲಿ ಶೇ. 70 ರಷ್ಟು ಉದ್ಯೋಗಗಳನ್ನು ಸ್ಥಳೀಯ ನಿವಾಸಿಗಳಿಗೇ ಮೀಸಲಿಡಲಾಗುವುದು.
ಇಂಧನ ನೆರವು: ಪ್ರತಿ ಮನೆಗೆ ವಾರ್ಷಿಕ ಎರಡು ಎಲ್ಪಿಜಿ (LPG) ಸಿಲಿಂಡರ್ಗಳನ್ನು ಉಚಿತವಾಗಿ ವಿತರಣೆ.
ಮೀನುಗಾರರ ಕಲ್ಯಾಣ: ಮೀನುಗಾರಿಕೆ ಸ್ತಬ್ಧವಾಗುವ ಮಾನ್ಸೂನ್ ಅವಧಿಯಲ್ಲಿ ಮೀನುಗಾರರ ಕುಟುಂಬಗಳಿಗೆ ಪ್ರತಿ ತಿಂಗಳು 10,000/- ರೂ. ಸಹಾಯಧನ.
ರಾಜಕೀಯ ಮತ್ತು ಆಡಳಿತಾತ್ಮಕ ಬದ್ಧತೆ: ದಶಕಗಳ ಕಾಲದ ಬೇಡಿಕೆಯಾದ ಪುದುಚೇರಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಒದಗಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ದಿನೇಶ್ ಗುಂಡೂರಾವ್ ಪುನರುಚ್ಚರಿಸಿದರು. ಅಲ್ಲದೆ, ಸ್ಥಗಿತಗೊಂಡಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
“ನಮ್ಮ ಈ ಯೋಜನೆಗಳು ಪುದುಚೇರಿ ಜನರ ಜೀವನಮಟ್ಟವನ್ನು ಕ್ರಾಂತಿಕಾರಕವಾಗಿ ಸುಧಾರಿಸಲಿವೆ. ಸುಭದ್ರ ಮತ್ತು ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು” ಎಂದು ಅವರು ಈ ಸಂದರ್ಭದಲ್ಲಿ ಜನತೆಯಲ್ಲಿ ಮನವಿ ಮಾಡಿದರು.








