ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಕಮಲ್ ಹಾಸನ್ (Kamal Haasan) ಕನ್ನಡ ಕಾಂಟ್ರವರ್ಸಿಗೆ ರಚಿತಾ ರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳಿನಿಂದ ಕನ್ನಡ ಎಂದು ಹೇಳಿಕೆ ನೀಡಿದ್ದಲ್ಲದೇ ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದ ಕಮಲ್ ಹಾಸನ್ಗೆ ರಚಿತಾ ತಿರುಗೇಟು ನೀಡಿದ್ದಾರೆ.
‘ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ರಚಿತಾ ರಾಮ್ ಮಾತನಾಡಿ, ಯಾಕೆ ಈ ಹಾಡು ಹೇಳ್ತಿದ್ದೀನಿ ಅಂತ ಎಲ್ಲರಿಗೂ ಅರ್ಥವಾಗಿರುತ್ತದೆ. ಕನ್ನಡ, ಕರ್ನಾಟಕ ಅಂತ ಬಂದಾಗ ಇದು ಪ್ರತಿಯೊಬ್ಬ ಕನ್ನಡಿಗನಿಗೂ ಎಮೋಷನ್. ಹಾಗೆಯೇ ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಅಂದಾಗ ಸುಮ್ಮನೆ ಕೂರಲು ಆಗಲ್ಲ ಎಂದಿದ್ದಾರೆ.
ನಾವು ಕನ್ನಡದ ಜನ ವಿಶಾಲ ಹೃದಯದವರು. ಪ್ರತಿ ಭಾಷೆ ಸಿನಿಮಾವನ್ನು ನೋಡುತ್ತೇವೆ. ಪ್ರತಿ ಭಾಷೆ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಬೇರೆ ಭಾಷೆಯ ಕಲಾವಿದರನ್ನು ಕೂಡ ನಾವು ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆಯ ಬಗ್ಗೆ ಯಾರಾದರೂ ಮಾತನಾಡ್ತಿದ್ದಾರೆ ಅಂದಾಗ ಯಾಕೆ ಧ್ವನಿಯೆತ್ತಬಾರದು. ನಾವಿಲ್ಲಿ ಯಾವ ಭಾಷೆಯ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ಎಲ್ಲಾ ಭಾಷೆಯನ್ನು ನಾವು ಗೌರವಿಸುತ್ತೇವೆ. ನಮ್ಮ ಭಾಷೆಯ ಬಗ್ಗೆ ಮಾತನಾಡಿದಾಗ ನಾವು ನಿಲ್ಲಬೇಕು ಎಂದರು.
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ ಎಂದು ತಮಿಳು ನಟನಿಗೆ ರಚಿತಾ ಟಾಂಗ್ ಕೊಟ್ಟಿದ್ದಾರೆ. ಚಿಕ್ಕವರು ತಪ್ಪು ಮಾಡಿದಾಕ್ಷಣ ಕ್ಷಮೆ ಕೇಳೋವರೆಗೂ ದೊಡ್ಡವರು ಬಿಡಲ್ಲ. ಅದೇ ದೊಡ್ಡವರು ತಪ್ಪು ಮಾಡಿದ್ರೆ ಏನು ಮಾಡಬೇಕು. ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ. ಕನ್ನಡವನ್ನು ತಪ್ಪು ಮಾತನಾಡುವವರನ್ನು ನಾವು ತಿದ್ದಿ ಕಲಿಸುತ್ತೇವೆ. ಕನ್ನಡ ಭಾಷೆಯ ಬಗ್ಗೆ ತಪ್ಪಾಗಿ ಮಾತನಾಡಿರುವರನ್ನು ಏನು ಅಂತ ಹೇಳೋಣ ಎಂದು ನಟಿ ಪ್ರಶ್ನಿಸಿದ್ದಾರೆ. ಈಗ ನಮ್ಮ ಭಾಷೆಯ ಮೇಲಿರುವಂತಹ ಗೌರವ ಪ್ರೀತಿಯನ್ನು ತಿಳಿಸೋಣ ಏನ್ ಹೇಳ್ತೀರಾ ಎಂದಿದ್ದಾರೆ. ಈ ಮೂಲಕ ಕಮಲ್ ಹಾಸನ್ ಹೇಳಿಕೆ ತಪ್ಪು. ಕ್ಷಮೆಯಾಚಿಸಬೇಕು ಎಂದಿದ್ದಾರೆ ರಚಿತಾ.









