ಬೆಂಗಳೂರು/ಉಡುಪಿ: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸದ ಹೊರೆಯನ್ನು ತಗ್ಗಿಸಲು ಮತ್ತು ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸಲು ಆರೋಗ್ಯ ಇಲಾಖೆ ‘ಸಮಸ್ತ’ (Samasta) ಸಾಫ್ಟ್ವೇರ್ ಎಂಬ ಡಿಜಿಟಲ್ ಅಸ್ತ್ರವನ್ನು ಸಿದ್ಧಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಈ ವ್ಯವಸ್ಥೆ ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಣಭಾರದ ರಿಜಿಸ್ಟರ್ಗಳಿಗೆ ಇತಿಶ್ರೀ
ಈ ಹಿಂದೆ ಆಶಾ ಕಾರ್ಯಕರ್ತೆಯರು ಮನೆಮನೆ ಭೇಟಿಯ ಸಂದರ್ಭದಲ್ಲಿ ಭಾರವಾದ ಮತ್ತು ದಪ್ಪನೆಯ ರಿಜಿಸ್ಟರ್ಗಳನ್ನು ಹೊತ್ತೊಯ್ಯಬೇಕಿತ್ತು. ಪ್ರತಿಯೊಂದು ಮಾಹಿತಿಯನ್ನು ಕೈಬರಹದ ಮೂಲಕ ದಾಖಲಿಸುವುದು ಸಮಯ ಮತ್ತು ಶ್ರಮ ಎರಡನ್ನೂ ವ್ಯಯಿಸುತ್ತಿತ್ತು. ಆದರೆ ಈಗ ‘ಸಮಸ್ತ’ ಸಾಫ್ಟ್ವೇರ್ ಮೂಲಕ ಈ ಕಿರಿಕಿರಿ ದೂರವಾಗಲಿದೆ.
ಈ ಹೊಸ ವ್ಯವಸ್ಥೆಯ ಪ್ರಮುಖ ಅಂಶಗಳು:
ಸ್ಮಾರ್ಟ್ ವರ್ಕ್: ರಿಜಿಸ್ಟರ್ ಬರೆಯುವ ಬದಲಿಗೆ ಮೊಬೈಲ್ ಮೂಲಕವೇ ಸ್ಥಳದಲ್ಲೇ ಮಾಹಿತಿ ಅಪ್ಡೇಟ್ ಮಾಡಬಹುದು.
ಸಮಯದ ಉಳಿತಾಯ: ಬರವಣಿಗೆಯ ಕೆಲಸ ಕಡಿಮೆಯಾಗುವುದರಿಂದ ಆಶಾ ಕಾರ್ಯಕರ್ತೆಯರಿಗೆ ಗುಣಮಟ್ಟದ ಸೇವೆ ನೀಡಲು ಹೆಚ್ಚಿನ ಸಮಯ ಸಿಗಲಿದೆ.
ತ್ವರಿತ ಸೇವೆ: ದತ್ತಾಂಶಗಳು ತಕ್ಷಣವೇ ಸರ್ವರ್ಗೆ ಲಭ್ಯವಾಗುವುದರಿಂದ ಕುಗ್ರಾಮದ ಜನರಿಗೂ ಆರೋಗ್ಯ ಸೇವೆಗಳು ವೇಗವಾಗಿ ತಲುಪಲಿವೆ.







