ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ (LPG) ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಅಭಾವದ ಕುರಿತು ಕೇಳಿಬರುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಸ್ತವಾಂಶಗಳನ್ನು ಜನರ ಮುಂದೆ ಇಟ್ಟರು.
ಪೂರೈಕೆಯ ಪ್ರಮುಖ ಅಂಕಿಅಂಶಗಳು:
ದೈನಂದಿನ ಪೂರೈಕೆ: ರಾಜ್ಯಕ್ಕೆ ಪ್ರತಿದಿನ ಸುಮಾರು 850 ಮೆಟ್ರಿಕ್ ಟನ್ ಎಲ್ಪಿಜಿ ಪೂರೈಕೆಯಾಗುತ್ತಿದೆ.
ಬಳಕೆಯ ಸರಾಸರಿ: ನಗರ ಪ್ರದೇಶಗಳಲ್ಲಿ ಸರಾಸರಿ 25-30 ದಿನಗಳಿಗೆ ಹಾಗೂ ಗ್ರಾಮೀಣ ಭಾಗದಲ್ಲಿ 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತಿದೆ. ಈ ಪ್ರಮಾಣಕ್ಕೆ ತಕ್ಕಂತೆ ಪೂರೈಕೆ ಕ್ರಮಬದ್ಧವಾಗಿದೆ.
ಹೋಟೆಲ್ಗಳಿಗೆ ಸಿಹಿ ಸುದ್ದಿ: ಕಳೆದ ಕೆಲವು ದಿನಗಳಿಂದ ಹೋಟೆಲ್ಗಳಲ್ಲಿ ಉಂಟಾಗಿದ್ದ ಅನಿಲ ಸಮಸ್ಯೆ ಮುಂದಿನ ಒಂದು ವಾರದೊಳಗೆ ಸಂಪೂರ್ಣವಾಗಿ ಬಗೆಹರಿಯಲಿದೆ.
ಸಾರ್ವಜನಿಕರಿಗೆ ಮನವಿ ಮತ್ತು ಎಚ್ಚರಿಕೆ:
ಕೆಲವೆಡೆ ಜನರು ಅಭಾವ ಉಂಟಾಗಬಹುದು ಎಂಬ ಭೀತಿಯಿಂದ (Panic Booking) ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಬುಕ್ ಮಾಡುತ್ತಿದ್ದಾರೆ. ಇದರಿಂದ ವಿತರಣಾ ವ್ಯವಸ್ಥೆಯಲ್ಲಿ ಅನಗತ್ಯ ಒತ್ತಡ ಮತ್ತು ಗೊಂದಲ ಉಂಟಾಗುತ್ತಿದೆ. ಗ್ರಾಹಕರು ಮಿತವ್ಯಯವಾಗಿ ಅನಿಲ ಬಳಸಬೇಕು ಮತ್ತು ಸಿಲಿಂಡರ್ಗಳನ್ನು ಅನಗತ್ಯವಾಗಿ ಸ್ಟಾಕ್ ಇಟ್ಟುಕೊಳ್ಳಬಾರದು ಎಂದು ಸಚಿವರು ಮನವಿ ಮಾಡಿದರು.
ಕೇಂದ್ರದೊಂದಿಗೆ ಸಮನ್ವಯ:
“ಎಲ್ಪಿಜಿ ವಿತರಣೆಯು ರಾಜ್ಯದ ಬಳಕೆಯ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ನಿರ್ಧರಿಸಲ್ಪಡುತ್ತದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಮತ್ತು ಸಂಬಂಧಿತ ತೈಲ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಅಗತ್ಯದ ಬಗ್ಗೆ ಕಾಲಕಾಲಕ್ಕೆ ಪತ್ರದ ಮೂಲಕ ಗಮನ ಸೆಳೆಯಲಾಗುತ್ತಿದೆ,” ಎಂದು ಮುನಿಯಪ್ಪ ತಿಳಿಸಿದರು.
ಅತ್ಯಾವಶ್ಯಕ ಸೇವೆಗಳಿಗೆ ಆದ್ಯತೆ:
ಆಸ್ಪತ್ರೆಗಳು, ಹೋಟೆಲ್ಗಳು ಮತ್ತು ವ್ಯಾಪಾರ ಉದ್ದೇಶದ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಸರಬರಾಜು ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಹರಿಸಲಿದೆ ಎಂದು ಅವರು ಭರವಸೆ ನೀಡಿದರು.







