ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮೂಲಸೌಕರ್ಯ ಬಲಪಡಿಸುವ ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಹಲವಾರು ಪ್ರಮುಖ ಯೋಜನೆಗಳ ಕುರಿತು ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯ ಪ್ರಮುಖಾಂಶಗಳು:
ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF): ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 80.33 ಕಿ.ಮೀ ಉದ್ದದ ರಸ್ತೆ ಸುಧಾರಣೆಗಾಗಿ ₹86.40 ಕೋಟಿ ಅನುದಾನದ ಅವಶ್ಯಕತೆಯನ್ನು ಸಂಸದರು ಸಚಿವರ ಗಮನಕ್ಕೆ ತಂದರು. ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಪ್ರಸ್ತಾಪಿಸಲಾಯಿತು.
ಗೋಕಾಕ-ಧಾರವಾಡ ಚತುಷ್ಪಥ ರಸ್ತೆ: ಗೋಕಾಕದಿಂದ ಯರಗಟ್ಟಿ ಮತ್ತು ಸವದತ್ತಿ ಮಾರ್ಗವಾಗಿ ಧಾರವಾಡದವರೆಗೆ ಈಗಿರುವ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ (Four-lane) ಪರಿವರ್ತಿಸಲು ಒತ್ತಾಯಿಸಲಾಯಿತು. ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗ ಇದಾಗಿರುವುದರಿಂದ, ವಾಹನ ದಟ್ಟಣೆ ಮತ್ತು ಅಪಘಾತಗಳನ್ನು ತಡೆಯಲು ಈ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ವಿವರಿಸಲಾಯಿತು.
ವಾಹನ ಟ್ರ್ಯಾಕಿಂಗ್ ವ್ಯವಸ್ಥೆ (VTS): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ₹25.39 ಕೋಟಿ ವೆಚ್ಚದ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ಕೇಂದ್ರದಿಂದ ಅನುಮೋದನೆ ಕೋರಲಾಯಿತು.
ಮಹಿಳಾ ಸುರಕ್ಷತೆ – ನಿರ್ಭಯ ನಿಧಿ: ಮಹಿಳೆಯರ ಸುರಕ್ಷತೆಗಾಗಿ ವಾಯವ್ಯ ಸಾರಿಗೆಯ 1,000 ಬಸ್ಸುಗಳು, ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ₹59.13 ಕೋಟಿ ಅನುದಾನದ ‘ನಿರ್ಭಯ ನಿಧಿ’ ಪ್ರಸ್ತಾವನೆಯನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ವಿನಂತಿಸಲಾಯಿತು.
ಸಚಿವರ ಭರವಸೆ: ಸಂಸದರು ಸಲ್ಲಿಸಿದ ಎಲ್ಲ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಬೆಳಗಾವಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಎಲ್ಲ ಯೋಜನೆಗಳ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.








