ಹಾವೇರಿ: ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಹಾವೇರಿ ಜಿಲ್ಲೆಯ ಪಾಲಿಗೆ ಸಂಪೂರ್ಣ ನಿರಾಶಾದಾಯಕವಾಗಿದ್ದು, ಜಿಲ್ಲೆಯ ಅಭಿವೃದ್ಧಿಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀರೋಧ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಬಜೆಟ್ನಲ್ಲಿ ಜಿಲ್ಲೆಯ ಪ್ರಮುಖ ಬೇಡಿಕೆಗಳು ಹಾಗೂ ಗ್ಯಾರೆಂಟಿ ಯೋಜನೆಗಳ ಅನುದಾನದ ಕುರಿತು ಬೊಮ್ಮಾಯಿ ಅವರು ಎತ್ತಿರುವ ಪ್ರಮುಖ ಅಂಶಗಳು ಇಲ್ಲಿವೆ:
1. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಮರೀಚಿಕೆ
ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಬಹುಕಾಲದ ಬೇಡಿಕೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈ ಬಜೆಟ್ನಲ್ಲಿ ಆಸ್ಪತ್ರೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಜಿಲ್ಲೆಯ ಜನತೆಗೆ ಮಾಡಿದ ದ್ರೋಹ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
2. ಶಿಶುನಾಳ ಶರೀಫರ ನೆಲಕ್ಕೆ ಅವಮಾನ
ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ರಾಜ್ಯದ ಇತರೆಡೆ ಶಾಲೆಗಳನ್ನು ಆರಂಭಿಸಲು ಮುಂದಾಗಿರುವ ಸರ್ಕಾರ, ಅವರ ಜನ್ಮಭೂಮಿಯಾದ ಹಾವೇರಿ ಜಿಲ್ಲೆಯನ್ನು ಮರೆತಿದೆ. “ಶರೀಫರ ನೆಲಕ್ಕೆ ಈ ಬಜೆಟ್ನಲ್ಲಿ ಸಿಕ್ಕಿದ್ದೇನು?” ಎಂದು ಅವರು ಪ್ರಶ್ನಿಸಿದ್ದಾರೆ.
3. ಬೇಡ್ತಿ-ವರದಾ ನದಿ ಜೋಡಣೆ ನಿರ್ಲಕ್ಷ್ಯ
ಹಾವೇರಿ ರೈತರ ಜೀವನಾಡಿಯಾಗಬೇಕಿದ್ದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ಬಜೆಟ್ನಲ್ಲಿ ಕೈಬಿಡಲಾಗಿದೆ.
ಮೇಕೆದಾಟು ಯೋಜನೆಗೆ ಆದ್ಯತೆ ನೀಡಿರುವ ಸರ್ಕಾರ, ವರದಾ-ಬೇಡ್ತಿ ಯೋಜನೆಗೆ ಕೇವಲ ಡಿಪಿಆರ್ (DPR) ಮಟ್ಟದಲ್ಲೇ ನಿಲ್ಲಿಸಿದೆ.
ತಕ್ಷಣ ಏಜೆನ್ಸಿ ನಿಗದಿಪಡಿಸಿ ಕಾಮಗಾರಿ ಆರಂಭಿಸಬೇಕಿದ್ದ ಸರ್ಕಾರ, ಬಜೆಟ್ನಲ್ಲಿ ಅನುದಾನ ಘೋಷಿಸದೆ ರೈತರಿಗೆ ಆಘಾತ ನೀಡಿದೆ.
4. ಗ್ಯಾರೆಂಟಿ ಯೋಜನೆಗಳ ‘ಅರೆಬರೆ’ ಅನುದಾನ
ಸರ್ಕಾರದ ಪಂಚ ಗ್ಯಾರೆಂಟಿಗಳಿಗೂ ಪೂರ್ಣ ಪ್ರಮಾಣದ ಹಣ ಮೀಸಲಿಟ್ಟಿಲ್ಲ ಎಂದು ಬೊಮ್ಮಾಯಿ ಅಂಕಿ-ಅಂಶಗಳ ಸಮೇತ ವಾಗ್ದಾಳಿ ನಡೆಸಿದ್ದಾರೆ:
ಶಕ್ತಿ ಯೋಜನೆ: ವೆಚ್ಚ 7,500 ಕೋಟಿ ರೂ. ದಾಟಿದ್ದರೂ, ಕೇವಲ 5,000 ಕೋಟಿ ರೂ. ಮಾತ್ರ ನೀಡಲಾಗಿದೆ.
ಗೃಹಲಕ್ಷ್ಮಿ: ಯೋಜನೆಗೆ ಅಗತ್ಯವಿರುವ ಪೂರ್ಣ ಹಣದ ಕೊರತೆಯಿದೆ.
ಯುವನಿಧಿ: ನಿರುದ್ಯೋಗಿ ಯುವಕರಿಗೆ ಆಸರೆಯಾಗಬೇಕಿದ್ದ ಈ ಯೋಜನೆಗೆ ನಯಾಪೈಸೆಯನ್ನೂ ಮೀಸಲಿಡದೆ ಯುವ ಸಮೂಹವನ್ನು ಸರ್ಕಾರ ವಂಚಿಸಿದೆ.







