ನವದೆಹಲಿ: ಆನೇಕಲ್ ತಾಲ್ಲೂಕಿನ ಜನತೆಯ ದಶಕಗಳ ರೈಲ್ವೆ ಬೇಡಿಕೆಗಳು ಹಾಗೂ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಸವಿಸ್ತಾರವಾದ ಮನವಿ ಸಲ್ಲಿಸಿದರು.
ಆನೇಕಲ್ ಭಾಗದ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ರೈಲ್ವೆ ಸಚಿವರ ಗಮನಕ್ಕೆ ತಂದ ಕುಮಾರಸ್ವಾಮಿ ಅವರು, ಸ್ಥಳೀಯರ ಹಿತದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮನವಿಯ ಪ್ರಮುಖ ಅಂಶಗಳು:
ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆಗ್ರಹ: ಆನೇಕಲ್ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಇಲ್ಲದ ಕಾರಣ, ಸಾರ್ವಜನಿಕರು ಬೆಂಗಳೂರು ಸಿಟಿ, ಯಶವಂತಪುರ ಅಥವಾ ಹೊಸೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಪ್ರಯಾಣಿಕರ ಸಮಯ ಮತ್ತು ಹಣ ವ್ಯಯವಾಗುತ್ತಿದ್ದು, ತಕ್ಷಣವೇ ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶ ನೀಡಬೇಕು.
ಅಪಘಾತ ತಡೆಗೆ ಕ್ರಮ: ಚಿಂತಲಮಡಿವಾಳ, ಗೋಟಮಾರಮ್ಮನಹಳ್ಳಿ ಮತ್ತು ಲಕ್ಷ್ಮೀನಾರಾಯಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಕಾರಣದಿಂದ ಅಪಘಾತದ ಭೀತಿ ಹೆಚ್ಚಿದೆ. ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದೆ.
ಮೂಲಸೌಕರ್ಯ ಅಭಿವೃದ್ಧಿ: ಈ ಗ್ರಾಮಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಅಂಡರ್ಬ್ರಿಡ್ಜ್ (Underbridge) ಅಥವಾ ಓವರ್ಬ್ರಿಡ್ಜ್ (Overbridge) ನಿರ್ಮಾಣ ಮಾಡಬೇಕು ಹಾಗೂ ಮಧ್ಯಂತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಸಚಿವರ ಸಕಾರಾತ್ಮಕ ಸ್ಪಂದನೆ:
ಕುಮಾರಸ್ವಾಮಿ ಅವರ ಮನವಿಯನ್ನು ಆಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಆನೇಕಲ್ ಭಾಗದ ಸಮಸ್ಯೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಎಲ್ಲಾ ವಿಷಯಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ, ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
“ಜನರ ಸಮಸ್ಯೆಗಳನ್ನು ಪರಿಹರಿಸುವುದು ನನ್ನ ಮೊದಲ ಆದ್ಯತೆ. ಆನೇಕಲ್ ತಾಲ್ಲೂಕಿನ ಜನರ ದೀರ್ಘಕಾಲದ ರೈಲ್ವೆ ಬೇಡಿಕೆಗಳ ಈಡೇರಿಕೆಗಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ. ಜನರ ಸಮಸ್ಯೆ – ನನ್ನ ಹೊಣೆ.” — ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.









