ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಯಣ ಆವರಣದಲ್ಲಿ **‘ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ – 2026’**ರ ಮೊದಲ ದಿನದ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ **‘ಜನಪದ ಉತ್ಸವ’**ಕ್ಕೆ ಚಾಲನೆ ದೊರೆಯಿತು.
ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ದುರ್ಗಾದಾಸ್ ಅವರು ಜನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಜನಪದ ಕಲೆಗಳು ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ಡಾ. ಗೀತಾ ಸಿದ್ಧಿ, ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು, ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜ್ (ಕ.ಆ.ಸೇ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯ ಮೇಲೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಸಮಾಜದ ಸದಸ್ಯರಾದ ಶಶಿಧರ್ ಭಾರಿಘಾಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಮತ್ತು ಜನಪದ ಉತ್ಸವದ ಸಂಚಾಲಕಿ ಹಾಗೂ ರಂಗಾಯಣದ ಹಿರಿಯ ಕಲಾವಿದೆ ಗೀತಾ ಮೋಂಟಡ್ಕ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ರಂಗಾಯಣದಲ್ಲಿ ಜನಪದ ಕಂಪಿನ ಮೊಳಗು: ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆದ ಈ ಜನಪದ ಉತ್ಸವದಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದು, ರಂಗಾಯಣದ ಆವರಣದಲ್ಲಿ ನಾಡಿನ ವೈವಿಧ್ಯಮಯ ಜನಪದ ಕಲೆಗಳ ಕಂಪು ಪಸರಿಸಿತು. ಮೊದಲ ದಿನವೇ ನೂರಾರು ಕಲಾಪ್ರೇಮಿಗಳು ಆಗಮಿಸಿ ಜನಪದ ವೈಭವವನ್ನು ಕಣ್ತುಂಬಿಕೊಂಡರು.







