ಬೆಳಗಾವಿ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಹಾಗೂ ವಿಮಾನ ನಿಲ್ದಾಣದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಸಂಸದ ಶ್ರೀ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಶ್ರೀ ಮಹಮ್ಮದ ರೋಶನ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಅಧಿಕಾರಿಗಳಿಗೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ರೈಲ್ವೆ ಯೋಜನೆಗಳು: ಭೂಸ್ವಾಧೀನಕ್ಕೆ ಚುರುಕು
- ಬೆಳಗಾವಿ-ಕಿತ್ತೂರು-ಧಾರವಾಡ ನೂತನ ಮಾರ್ಗ: ಈ ಯೋಜನೆಗೆ ಅಗತ್ಯವಿರುವ 1200 ಎಕರೆ ಜಮೀನಿನ ಪೈಕಿ 407 ಎಕರೆಗೆ ಸಂಬಂಧಿಸಿದಂತೆ 149 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದ ಶೀಘ್ರ ಹಣ ಬಿಡುಗಡೆಯಾದ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
- ಮೇಲ್ಸೇತುವೆಗಳು: ಟಿಳಕವಾಡಿ ಬಳಿಯ ಎಲ್.ಸಿ ನಂ. 381 ರಲ್ಲಿ ಎರಡನೇ ಲೈನ್ ನಿರ್ಮಾಣಕ್ಕೆ ಸಂಚಾರ ಬದಲಾವಣೆ ಅನುಮತಿ ಕೋರಲಾಗಿದೆ. ಎಲ್.ಸಿ ನಂ. 382 ಮತ್ತು 383 ರ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಲು ಸೂಚಿಸಲಾಯಿತು.
- ಖಾನಾಪುರ ಅರಣ್ಯ ಸಮಸ್ಯೆ: ಖಾನಾಪುರ ಬಳಿಯ ಮೇಲ್ಸೇತುವೆ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಟ್ಟರ್ ಅವರು, ಕೂಡಲೇ ಅನುಮೋದನೆ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ: ವಿಳಂಬಕ್ಕೆ ತರಾಟೆ
- ಬೆಳಗಾವಿ-ಸಂಕೇಶ್ವರ 6 ಪಥದ ರಸ್ತೆ: ಈ ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ತಕ್ಷಣವೇ ಚುರುಕುಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.
- ಹಲಗಾ-ಮಚ್ಚೆ ಬೈಪಾಸ್: ಕಾಮಗಾರಿ ಪೂರ್ಣಗೊಳ್ಳಬೇಕಾದ ಅವಧಿ ಮುಗಿದು ವರ್ಷ ಕಳೆದರೂ ಮುಗಿಯದಿರುವುದನ್ನು ಸಂಸದರು ಗಂಭೀರವಾಗಿ ಪರಿಗಣಿಸಿ, ಶೀಘ್ರ ಪೂರ್ಣಗೊಳಿಸಲು ಆದೇಶಿಸಿದರು.
- ಬೆಳಗಾವಿ-ರಾಯಚೂರು ರಸ್ತೆ: ಫೇಸ್-1 ರಡಿ 35 ಕಿ.ಮೀ ಭೂಸ್ವಾಧೀನ ಮುಗಿದಿದ್ದು, ಬಾಕಿ ಉಳಿದ ಪ್ರಕ್ರಿಯೆಯನ್ನು ಶೀಘ್ರ ಮುಗಿಸಿ ಕಾಮಗಾರಿ ಆರಂಭಿಸಲು ಸೂಚಿಸಲಾಯಿತು.
ವಿಮಾನ ನಿಲ್ದಾಣ: ರಕ್ಷಣಾ ಸಚಿವರ ಗಮನಕ್ಕೆ
ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ವಾಯುಸೇನೆಯಿಂದ ಭೂಮಿ ಪಡೆಯುವಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ತಾವು ಸಂಸದೀಯ ರಕ್ಷಣಾ ಸಮಿತಿಯ ಸದಸ್ಯರಾಗಿರುವುದರಿಂದ, ಈ ವಿಷಯವನ್ನು ನೇರವಾಗಿ ರಕ್ಷಣಾ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಇತ್ಯರ್ಥಪಡಿಸುವುದಾಗಿ ಜಗದೀಶ್ ಶೆಟ್ಟರ್ ಸಭೆಗೆ ತಿಳಿಸಿದರು.
ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಶ್ರೀಮತಿ ಜೈನಾಪೂರ, ಶ್ರೀ ಚೌಹಾಣ, ಶ್ರೀಮತಿ ಕವಿತಾ ಯೋಗಪ್ಪನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭೂವನೇಶ ಕುಮಾರ, ವಿಮಾನಯಾನ ಪ್ರಾಧಿಕಾರದ ನಿರ್ದೇಶಕ ತ್ಯಾಗರಾಜನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







