ಹುಬ್ಬಳ್ಳಿ: “ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯಾ ಎಂಬುವವರ ಸಾವು ಕೇವಲ ಒಂದು ಕ್ರೂರ ಹತ್ಯೆಯಲ್ಲ, ಇದು ಇಡೀ ಸಮಾಜ ತಲೆತಗ್ಗಿಸಬೇಕಾದ ‘ಮರ್ಯಾದೆಗೇಡು ಹತ್ಯೆ’. ಗರ್ಭಿಣಿ ಮಹಿಳೆಯ ಮೇಲೆ ಇಂತಹ ದೌರ್ಜನ್ಯ ನಡೆಸಿರುವುದು ಮನುಷ್ಯತ್ವಕ್ಕೆ ಮಾಡಿದ ಅವಮಾನ,” ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎ.ಆರ್. ಕೃಷ್ಣಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಮಿತಿಯ ಸದಸ್ಯರೊಂದಿಗೆ ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ದೌರ್ಜನ್ಯಕ್ಕೆ ಒಳಗಾಗಿರುವ ದೊಡಮನಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಪ್ರಕರಣ ನಡೆದ ಸ್ಥಳವನ್ನು ಖುದ್ದು ಪರಿಶೀಲಿಸಿದ ಅವರು, ಕುಟುಂಬಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕಠಿಣ ಶಿಕ್ಷೆಗೆ ಆಗ್ರಹ: “ಒಬ್ಬ ಗರ್ಭಿಣಿ ಮಹಿಳೆಯ ಮೇಲೆ ಈ ರೀತಿಯ ದೌರ್ಜನ್ಯ ಎಸಗಿರುವ ತಪ್ಪಿತಸ್ಥರಿಗೆ ಯಾವುದೇ ಕಾರಣಕ್ಕೂ ರಿಯಾಯಿತಿ ನೀಡಬಾರದು. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರಕ್ಕೆ ಸಮಿತಿಯ ವತಿಯಿಂದ ವರದಿ ಸಲ್ಲಿಸಲಾಗುವುದು,” ಎಂದು ತಿಳಿಸಿದರು.
ಕುಟುಂಬದ ನೆರವಿಗೆ ಕ್ರಮ: ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಅಗತ್ಯ ನೆರವು ನೀಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರು: ಡಾ. ಡಿ. ತಿಮ್ಮಯ್ಯ, ಎಫ್.ಎಚ್. ಜಕ್ಕಪ್ಪನವರ್, ವಿಧಾನಸಭೆ ಸದಸ್ಯರು: ದುರ್ಯೋಧನ ಐಹೋಳೆ, ಸಮೃದ್ಧಿ ಮಂಜುನಾಥ್, ಮಹೇಂದ್ರ ತಮ್ಮಣ್ಣನವರ್, ಬಸವರಾಜ್ ಮತ್ತಿಮಡು, ಡಾ. ಚಂದ್ರು ಲಮಾಣಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪ್ರಕರಣದ ಕುರಿತು ಸಮಿತಿಗೆ ಮಾಹಿತಿ ನೀಡಿದರು.







