ನವದೆಹಲಿ: ಮೌಲ್ಯಗಳಿಲ್ಲದ ಉನ್ನತ ಶಿಕ್ಷಣವು ಸಮಾಜಕ್ಕೆ ಅಪಾಯಕಾರಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ (ಜ.02) ಕಳವಳ ವ್ಯಕ್ತಪಡಿಸಿದ್ದು, ದೇಶದಲ್ಲಿ ವೈಟ್ ಕಾಲರ್ ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ಅವರು ಭೂಪಾಲ್ ನೋಬೆಲ್ಸ್ ಯೂನಿರ್ವಸಿಟಿಯ 104ನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ದೆಹಲಿಯ ಕೆಂಪು ಕೋಟೆ ಸಮೀಪ ನವೆಂಬರ್ 10ರಂದು ನಡೆದ ಕಾರು ಬಾಂಬ್ ಆತ್ಮಾಹುತಿ ದಾಳಿಯನ್ನು ಹಿನ್ನೆಲೆಯಾಗಿರಿಸಿ ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ದೆಹಲಿ ಕಾರು ಬಾಂಬ್ ಸ್ಫೋಟದ ಆರೋಪಿಗಳು ಉನ್ನತ ಪದವಿ ಪಡೆದ ವೈದ್ಯರಾಗಿದ್ದಾರೆ. ಅಂದರೆ ಕೇವಲ ಶಿಕ್ಷಣ ಮಾತ್ರವೇ ನೈತಿಕ ನಡವಳಿಕೆಯನ್ನು ಖಾತರಿಪಡಿಸುವುದಿಲ್ಲ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ ಎಂದು ರಾಜನಾಥ್ ಸಿಂಗ್ ವಿಶ್ಲೇಷಿಸಿದ್ದಾರೆ.
ಭಾರತದಲ್ಲಿ ಇಂದು ವೈಟ್ ಕಾಲರ್ ಭಯೋತ್ಪಾದನೆ ನಡೆಯುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಉನ್ನತ ಪದವಿ ಪಡೆದ ವ್ಯಕ್ತಿಗಳೇ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ದೆಹಲಿ ಬಾಂಬ್ ಸ್ಫೋಟದ ರೂವಾರಿಗಳೆಲ್ಲ ವೈದ್ಯರಾಗಿದ್ದಾರೆ. ಕೈಯಲ್ಲಿ ಪದವಿ ಹಿಡಿದವರು, ಜೇಬಿನಲ್ಲಿ ಆರ್ ಡಿಎಕ್ಸ್ ಇಟ್ಟುಕೊಂಡಿದ್ದಾರೆ. ಇದು ಶಿಕ್ಷಣದ ಮೌಲ್ಯದ ಜತೆಗೆ ಉತ್ತಮ ಚಾರಿತ್ರ್ಯವನ್ನು ಹೊಂದಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಸಮೀಪ ವೈದ್ಯ ಉಮರ್ ಉನ್ ನಬಿ ಐ20 ಕಾರಿನಲ್ಲಿ ಆರ್ ಡಿಎಕ್ಸ್ ಸ್ಫೋಟಕ ತುಂಬಿದ್ದ ಕಾರನ್ನು ಸ್ಫೋಟಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ 15 ಜನರು ಸಾವನ್ನಪ್ಪಿದ್ದರು. ಇದರ ಪರಿಣಾಮ ನಡೆದ ತನಿಖೆಯಲ್ಲಿ ವೈಟ್ ಕಾಲರ್ ಟೆರರಿಸಂ ಬಯಲಿಗೆ ಬಂದಿತ್ತು. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಮತ್ತೆ ಮೂವರು ವೈದ್ಯರನ್ನು(ಡಾ.ಮುಝಾಮಿಲ್ ಗನಿ, ಡಾ.ಅದೀಲ್ ರಾಥೇರ್ ಮತ್ತು ಡಾ.ಶಾಹೀನಾ ಸಯೀದ್) ಬಂಧಿಸಲಾಗಿತ್ತು.








