ಚಾಮರಾಜನಗರ, ಡಿ.೩೦: ಕರ್ನಾಟಕದ ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ ಜತೆಗೆ ಸಫಾರಿಗೂ ಕೂಡ ತಡೆ ಬಿದ್ದಿದೆ. ಹೀಗಾಗಿ ವನ್ಯಜೀವಿ ಪ್ರಿಯರಿಗೆ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ತಾತ್ಕಾಲಿಕವಾಗಿ ಇಲ್ಲ.
ಹೊಸ ವರ್ಷಾಚರಣೆ ನೆಪದಲ್ಲಿ ಬಂಡೀಪುರದಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಮೋಜು-ಮಸ್ತಿ ಮಾಡಿ ಕಾಡಿನಲ್ಲಿರುವ ಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಬಂಡೀಪುರ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ವರ್ಷದ ಕೊನೆಯ ದಿನ ಹಾಗೂ ಹೊಸ ವರ್ಷದ ಮೊದಲ ದಿನ ಬಂಡೀಪುರದ ಅರಣ್ಯ ಇಲಾಖೆ ಕಾಟೇಜ್ಗಳಲ್ಲೂ ವಾಸ್ತವ್ಯವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಈ ಬಾರಿಯೂ ಕೂಡ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆ ಮೋಜು, ಮಸ್ತಿಗೆ ಪ್ಲಾನ್ ಮಾಡಿದ್ದ ಪ್ರವಾಸಿಗಳಿಗೆ ನಿರಾಸೆಯಾದಂತಾಗಿದೆ
ವಸತಿ ಗೃಹಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಿರುವ ಜತೆಗೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಖಾಸಗಿ ರೆಸಾರ್ಟ್ಗಳು ಹಾಗೂ ಹೋಂ ಸ್ಟೇಗಳಿಗೂ ಕೂಡ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ಅಡಚಣೆಯಾಗಬಾರದೆಂಬ ಉದ್ದೇಶದಿಂದ ಖಾಸಗಿ ರೆಸಾರ್ಟ್ಗಳು ಹಾಗೂ ಹೋಂ ಸ್ಟೇಗಳಲ್ಲಿ ಈ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಅನುಸರಿಸಲೇಬೇಕಾಗಿದೆ.
ಇನ್ನೂ ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಯಮಪಾಲನೆ ಮಾಡುವಂತೆ ಬಂಡೀಪುರದ ಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ. ನಿಮಯ ಪಾಲನೆ ಮಾಡದವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅರಣ್ಯ ಇಲಾಖೆ ಮಾರ್ಗಸೂಚಿ:
ಖಾಸಗಿ ರೆಸಾರ್ಟ್ಗಳು, ಹೋಂ ಸ್ಟೇಗಳು ರಾತ್ರಿ ೧೦ ಗಂಟೆಗೆ ಬಂದ್.
ಫೈರ್ ಕ್ಯಾಂಪ್ ಹಾಕುವಂತಿಲ್ಲ.
ಅಧಿಕ ಪ್ರಮಾಣದ ಶಬ್ದ ಮಾಡುವಂತಿಲ್ಲ. ಲೈಟಿಂಗ್ಸ್, ಡಿಜೆ ಬಳಸುವಂತಿಲ್ಲ.







