ಬೆಂಗಳೂರು: ರಾಜಧಾನಿಯ ಪಶ್ಚಿಮ ಭಾಗದ ಜನತೆಗೆ ಉತ್ತಮ ಹೃದಯ ಸಂಬಂಧಿ ಚಿಕಿತ್ಸೆ ನೀಡುವ ಉದ್ದೇಶದಿಂದ ಗೋವಿಂದರಾಜನಗರ ಕ್ಷೇತ್ರದಲ್ಲಿ 100 ಹಾಸಿಗೆಗಳ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಕಾಸ ಸೌಧದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಜಯದೇವ ಆಸ್ಪತ್ರೆ ನಡುವೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಶಾಸಕಿ ಪ್ರಿಯಕೃಷ್ಣ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದ ಫಲವಾಗಿ ಈ ಯೋಜನೆ ರೂಪುಗೊಂಡಿದ್ದು, ಬೆಂಗಳೂರು ನಗರದ ಪಶ್ಚಿಮ ಭಾಗದ ನಿವಾಸಿಗಳಿಗೆ ಇದು ಆಶಾಕಿರಣವಾಗಲಿದೆ.
ಯೋಜನೆಯ ಮುಖ್ಯಾಂಶಗಳು:
ಆಡಳಿತ ವಿಕೇಂದ್ರೀಕರಣ: ಜಯದೇವ ಆಸ್ಪತ್ರೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹಿರಿಯ ನಾಗರಿಕರಿಗೆ ಅವರ ಪ್ರದೇಶದಲ್ಲೇ ಗುಣಮಟ್ಟದ ಹೃದಯ ಚಿಕಿತ್ಸೆ ಒದಗಿಸಲು ಈ ವಿಕೇಂದ್ರೀಕರಣ ಕ್ರಮ ಕೈಗೊಳ್ಳಲಾಗಿದೆ.
ಲಕ್ಷಾಂತರ ಜನರಿಗೆ ಅನುಕೂಲ: ಗೋವಿಂದರಾಜನಗರದ ಈ ಘಟಕದಿಂದ ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಪೀಣ್ಯ ಹಾಗೂ ಬೆಂಗಳೂರು ಗ್ರಾಮಾಂತರದ ನಿವಾಸಿಗಳಿಗೆ ನೇರ ಪ್ರಯೋಜನವಾಗಲಿದೆ.
ನೆರೆ ಜಿಲ್ಲೆಗಳಿಗೂ ವರ: ಬೆಂಗಳೂರು ನಗರ ಮಾತ್ರವಲ್ಲದೆ ರಾಮನಗರ, ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬರುವ ರೋಗಿಗಳಿಗೂ ಈ ನೂತನ ಘಟಕವು ಸಹಕಾರಿಯಾಗಲಿದೆ.
ಗಣ್ಯರ ಉಪಸ್ಥಿತಿ: ವಿಕಾಸ ಸೌಧದಲ್ಲಿ ನಡೆದ ಈ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಬಿ. ದಿನೇಶ್, ಜಿಬಿಎ ಮುಖ್ಯ ಆಯುಕ್ತ ಎನ್. ಮಹೇಶ್ವರ ರಾವ್, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಮತ್ತು ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.






