ಬೆಂಗಳೂರು: ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ ತೀರ್ಮಾನ ಕೈಗೊಂಡಿದೆ.
ವಿಧಾನಸೌಧದಲ್ಲಿಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ಪಾಲ್ಗೊಂಡು, ರಾಜ್ಯದ ದಲಿತ ಸಮುದಾಯಗಳ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾಗಲಾಯಿತು.
ಮೀಸಲಾತಿ ಹಂಚಿಕೆಯ ವಿವರ ಹೀಗಿದೆ:
ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಒಟ್ಟು ಶೇ. 17ರಷ್ಟು (ಹಿಂದಿನ 15% ರಿಂದ ಹೆಚ್ಚಳವಾದ ನಂತರದ ಲಭ್ಯತೆ) ಮೀಸಲಾತಿಯಲ್ಲಿ ಈ ಕೆಳಗಿನಂತೆ ವರ್ಗೀಕರಣ ಮಾಡಲು ಸಮ್ಮತಿಸಲಾಗಿದೆ:
ದಲಿತ ಎಡಗೈ ಸಮುದಾಯ: ಶೇ. 6
ದಲಿತ ಬಲಗೈ ಸಮುದಾಯ: ಶೇ. 5.5
ಸ್ಪೃಶ್ಯ ಸಮುದಾಯಗಳು (ಲಂಬಾಣಿ, ಬೋವಿ, ಕೊರಚ, ಕೊರಮ): ಶೇ. 4.5
ಇತರ ಪರಿಶಿಷ್ಟ ಜಾತಿಗಳು: ಶೇ. 1
(ಗಮನಿಸಿ: ಸರ್ಕಾರವು ಒಟ್ಟು 17% ಮೀಸಲಾತಿಯನ್ನು ಆಧರಿಸಿ ಈ ವರ್ಗೀಕರಣದ ಸೂತ್ರವನ್ನು ಅಂತಿಮಗೊಳಿಸಿದೆ)
ಸರ್ಕಾರದ ಭರವಸೆ ಈಡೇರಿಕೆ:
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಒಳ ಮೀಸಲಾತಿ ಜಾರಿಯನ್ನು ಸಿದ್ದರಾಮಯ್ಯ ರವರ ನೇತೃತ್ವದ ನಮ್ಮ ಸರ್ಕಾರವು ಈಗ ಈಡೇರಿಸಿದೆ. ಈ ತೀರ್ಮಾನವು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಎಲ್ಲಾ ಉಪಜಾತಿಗಳಿಗೂ ಸಮಾನ ಅವಕಾಶ ಸಿಗುವಂತೆ ಮಾಡಲಿದೆ.
ನೇಮಕಾತಿ ಪ್ರಕ್ರಿಯೆಗೆ ಚಾಲನೆ:
ಈ ತಾಂತ್ರಿಕ ಪ್ರಕ್ರಿಯೆಗಳ ಕಾರಣದಿಂದ ತಡೆಹಿಡಿಯಲಾಗಿದ್ದ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿ ಯುವಜನತೆಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಈ ಐತಿಹಾಸಿಕ ನಿರ್ಧಾರವು ರಾಜ್ಯದ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಹೊಸ ಶಕ್ತಿ ನೀಡಲಿದೆ.






