ಬೆಂಗಳೂರು: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 60 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಹೆಮ್ಮೆಯ ಯುವ ಪ್ರತಿಭೆ ಆಯುಷ್ ಶೆಟ್ಟಿ ಅವರನ್ನು ಇಂದು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಐತಿಹಾಸಿಕ ಸಾಧನೆಗೆ ಗೌರವ:
ಯುವ ಸಾಧಕ ಆಯುಷ್ ಶೆಟ್ಟಿ ಅವರ ಈ ಮೈಲಿಗಲ್ಲನ್ನು ಶ್ಲಾಘಿಸಿದ ಕುಮಾರ್ ಬಂಗಾರಪ್ಪ ಅವರು, ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕ್ರೀಡಾಪಟುವನ್ನು ಆತ್ಮೀಯವಾಗಿ ಸ್ವಾಗತಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “60 ದಶಕಗಳ ಬಳಿಕ ಏಷ್ಯನ್ ಬ್ಯಾಡ್ಮಿಂಟನ್ನಲ್ಲಿ ಇಂತಹದೊಂದು ಸಾಧನೆ ಮಾಡಿರುವುದು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ವಿಷಯ” ಎಂದು ಬಣ್ಣಿಸಿದರು.
ಕ್ರೀಡಾ ಲೋಕದಲ್ಲಿ ಹೊಸ ಸಂಚಲನ:
“ಆಯುಷ್ ಅವರ ಈ ಅಸಾಧಾರಣ ಗೆಲುವು ಕ್ರೀಡಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಇಂದಿನ ಯುವ ಕ್ರೀಡಾಪಟುಗಳಿಗೆ ಆಯುಷ್ ಅವರ ಪರಿಶ್ರಮ ಮತ್ತು ಛಲ ಮಾದರಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಣ್ಣಿನ ಪ್ರತಿಭೆ ಬೆಳ್ಳಿ ಪದಕದ ಸಾಧನೆ ಮಾಡಿರುವುದು ಸಂಭ್ರಮದ ಸಂಗತಿ,” ಎಂದು ಕುಮಾರ್ ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.
ಉಜ್ವಲ ಭವಿಷ್ಯಕ್ಕೆ ಹಾರೈಕೆ:
ಯುವ ಪ್ರತಿಭೆಯನ್ನು ಹುರಿದುಂಬಿಸಿದ ಅವರು, “ಮುಂದಿನ ದಿನಗಳಲ್ಲಿ ಆಯುಷ್ ಶೆಟ್ಟಿ ಅವರು ಒಲಿಂಪಿಕ್ಸ್ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಯುಷ್ ಶೆಟ್ಟಿ ಅವರ ಕುಟುಂಬ ಸದಸ್ಯರು, ಕ್ರೀಡಾ ಅಭಿಮಾನಿಗಳು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದು, ಯುವ ಸಾಧಕನನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.






