ಬಾಗೇಪಲ್ಲಿ: “ಸಮೃದ್ಧ ಮತ್ತು ಸಮಾನತೆಯ ಭಾರತದ ಕನಸು ಕಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಸಂಕಲ್ಪದ ಮೂಲಕ ನನಸಾಗುತ್ತಿವೆ,” ಎಂದು ಮಾಜಿ ಸಚಿವರಾದ ಡಾ. ಕೆ. ಸುಧಾಕರ್ ಅವರು ತಿಳಿಸಿದರು.
ಬಾಗೇಪಲ್ಲಿಯಲ್ಲಿ ಶ್ರೀ ಹರಿನಾಥ ರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಭಾ ಪುರಸ್ಕಾರ ಮತ್ತು ಸುರಕ್ಷತೆಗೆ ಆದ್ಯತೆ
ಕಾರ್ಯಕ್ರಮದ ಭಾಗವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (SC/ST) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ, ಸಾರ್ವಜನಿಕರಲ್ಲಿ ಸುರಕ್ಷತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಉಚಿತ ಹೆಲ್ಮೆಟ್ ವಿತರಿಸಲಾಯಿತು.
ಅಂಬೇಡ್ಕರ್ ಆಶಯಕ್ಕೆ ಪೂರಕವಾದ ಕೇಂದ್ರದ ಯೋಜನೆಗಳು
ಬಾಬಾಸಾಹೇಬರ ಆದರ್ಶಗಳನ್ನು ಸ್ಮರಿಸಿದ ಸುಧಾಕರ್ ಅವರು, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಧನ್, ಸ್ವಚ್ಛ ಭಾರತ, ಉಜ್ವಲ ಮತ್ತು ಜಲಜೀವನ್ ಮಿಷನ್ನಂತಹ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಮತ್ತು ನ್ಯಾಯ ಒದಗಿಸುತ್ತಿವೆ. ಇದು ಬಾಬಾಸಾಹೇಬರು ಕಂಡ ಸಮಾನತೆಯ ಕನಸನ್ನು ಸಾಕಾರಗೊಳಿಸುವ ಹಾದಿಯಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು, ಮಹೇಶ್ವರಾನಂದ ಸ್ವಾಮೀಜಿ (ಆತ್ಮಬೋಧ ತಪೋವನ ಮಠ), ಸರ್ದಾರ್ ಸೇವಾಲಾಲ್ ಸ್ವಾಮೀಜಿ (ಚಿತ್ರದುರ್ಗದ ಬಂಜಾರ ಗುರುಪೀಠ), ಮುಖಂಡರಾದ ಹರಿನಾಥ ರೆಡ್ಡಿ * ನಿವೃತ್ತ ಡಿವೈಎಸ್ ಪಿ ಟಿ. ಕೋನಪ್ಪ ರೆಡ್ಡಿ
ಶ್ರೀ ಹರಿನಾಥ ರೆಡ್ಡಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳು, ಸ್ಥಳೀಯ ಮುಖಂಡರು ಹಾಗೂ ನೂರಾರು ನಾಗರಿಕರು ಈ ಸಂದರ್ಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






