ಬಾಗಲಕೋಟೆ: ಕಳೆದ ತಿಂಗಳು ನಗರದಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯ ವೇಳೆ ಸಂಭವಿಸಿದ ಕಲ್ಲು ತೂರಾಟ ಮತ್ತು ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಹಿಂದೂ ಕಾರ್ಯಕರ್ತರ ಪರವಾಗಿ ಬಿಜೆಪಿ ಧ್ವನಿ ಎತ್ತಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಯಕರ್ತರ ಪೋಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ನಗರದ ಕಿಲ್ಲಾಗಲ್ಲಿಯಲ್ಲಿ ಕಾರ್ಯಕರ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ ಅವರು, ಸಂಕಷ್ಟದ ಸಮಯದಲ್ಲಿ ಪಕ್ಷವು ಕಾರ್ಯಕರ್ತರ ಬೆನ್ನಿಗೆ ದೃಢವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಗಾಯಾಳು ಕಾರ್ಯಕರ್ತನ ಆರೋಗ್ಯ ವಿಚಾರಣೆ
ನಂತರ, ಗಲಭೆಯ ಸಂದರ್ಭದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ಬಾರಕೇರ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿದರು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸಚಿವರು, ಶೀಘ್ರ ಗುಣಮುಖರಾಗುವಂತೆ ಹಾರೈಸಿ ಸಾಂತ್ವನ ಹೇಳಿದರು.
ಸರ್ಕಾರದ ವಿರುದ್ಧ ವಾಗ್ದಾಳಿ:
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ತನ್ನ ಓಟ್ ಬ್ಯಾಂಕ್ ತುಷ್ಟೀಕರಣವೊಂದೇ ಆದ್ಯತೆಯಾಗಿದೆ. ಇಂತಹ ಘಟನೆಗಳ ಮೂಲಕ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಆದರೆ ಬಿಜೆಪಿ ಸದಾ ಹಿಂದೂ ಕಾರ್ಯಕರ್ತರ ಹಿತರಕ್ಷಣೆಗಾಗಿ ಹೋರಾಡಲಿದೆ,” ಎಂದು ಗುಡುಗಿದರು.
ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಮುಖರು: ಈ ಭೇಟಿಯ ವೇಳೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವು ಪ್ರಮುಖ ನಾಯಕರು ರಾಜ್ಯಾಧ್ಯಕ್ಷರಿಗೆ ಸಾಥ್ ನೀಡಿದರು: ಜಿಲ್ಲಾ ನಾಯಕತ್ವ: ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ. ಶಾಸಕರು: ಶೈಲೇಂದ್ರ ಬೆಲ್ದಾಳೆ, ಪಿ.ಎಚ್. ಪೂಜಾರ್, ಹನುಮಂತ ನಿರಾಣಿ.ಹಿರಿಯ ನಾಯಕರು: ಮಾಜಿ ಶಾಸಕರುಗಳಾದ ಎಂ.ಡಿ. ಲಕ್ಷ್ಮೀನಾರಾಯಣ, ಅರುಣ್ ಶಹಾಪುರ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಹಲವು ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.







