ಬೆಂಗಳೂರು: ಕೆ.ಸಿ. ವ್ಯಾಲಿ, ಹೆಚ್.ಎನ್. ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಪೂರೈಕೆಯಾಗುತ್ತಿರುವ ಸಂಸ್ಕರಿತ ನೀರು ವೈಜ್ಞಾನಿಕವಾಗಿ ಅತ್ಯಂತ ಸುರಕ್ಷಿತವಾಗಿದ್ದು, ಕೃಷಿ ಮತ್ತು ಅಂತರ್ಜಲ ವೃದ್ಧಿಗೆ ಪೂರಕವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನೀರಿನ ಗುಣಮಟ್ಟದ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಐಐಎಸ್ಸಿ (IISc) ತಂಡದ ಪ್ರಮುಖ ಸಂಶೋಧನಾ ವರದಿ:
2019 ರಿಂದ ಈ ವ್ಯಾಲಿಗಳ ನೀರಿನ ಮೇಲೆ ನಿರಂತರ ನಿಗಾ ಇಟ್ಟಿರುವ ಐಐಎಸ್ಸಿ ತಂಡವು ಈ ಕೆಳಗಿನ ಪ್ರಮುಖ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ:
ಅಂತರ್ಜಲ ಮಟ್ಟದಲ್ಲಿ ಭಾರಿ ಏರಿಕೆ: ಹಿಂದೆ 1500 ಅಡಿ ಆಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟವು ಈ ಯೋಜನೆಯಿಂದಾಗಿ ಇಂದು 200-300 ಅಡಿಗಳಿಗೆ ಏರಿಕೆಯಾಗಿದೆ.
ಐದು ಹಂತದ ಶುದ್ಧೀಕರಣ: ನೀರನ್ನು ಐದು ಹಂತಗಳಲ್ಲಿ ಸಂಸ್ಕರಿಸಲಾಗುತ್ತಿದ್ದು, ಇದು ಮಾನವ, ಜಾನುವಾರು ಮತ್ತು ಕೃಷಿ ಬಳಕೆಗೆ ಸಂಪೂರ್ಣ ಯೋಗ್ಯವಾಗಿದೆ.
ಮಣ್ಣು ಮತ್ತು ಬೆಳೆ ಸುಧಾರಣೆ: ಸಂಸ್ಕರಿತ ನೀರಿನ ಬಳಕೆಯಿಂದ ಬೆಳೆ ಉತ್ಪಾದನೆ ಹೆಚ್ಚಾಗಿದ್ದು, ಮಣ್ಣಿನ ಗುಣಮಟ್ಟವೂ ಸುಧಾರಿಸಿದೆ. ಯಾವುದೇ ಹಾನಿಕಾರಕ ಲೋಹಾಂಶಗಳು ಪತ್ತೆಯಾಗಿಲ್ಲ.
ನಿರಂತರ ನಿಗಾ: ಮುಂದಿನ 10 ವರ್ಷಗಳ ಕಾಲ ಇದೇ ರೀತಿಯ ಗುಣಮಟ್ಟ ಪರಿಶೀಲನೆ ಮತ್ತು ಸಂಶೋಧನೆ ನಡೆಸಲು ಐಐಎಸ್ಸಿ ತಂಡಕ್ಕೆ ಸೂಚನೆ ನೀಡಲಾಗಿದೆ.
ಅಪಪ್ರಚಾರಕ್ಕೆ ತೆರೆ:
ಸಂಸ್ಕರಿತ ನೀರಿನ ಬಗ್ಗೆ ಸಾರ್ವಜನಿಕರಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿ ಹಾಗೂ ಅಪಪ್ರಚಾರಗಳಿಗೆ ಈ ವೈಜ್ಞಾನಿಕ ವರದಿಯು ತಕ್ಕ ಉತ್ತರ ನೀಡಿದೆ. ಈ ಮಾದರಿ ಯೋಜನೆಯು ಇಂದು ಇಡೀ ದೇಶಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಸಚಿವರು ಶ್ಲಾಘಿಸಿದರು.







