ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್ 2.0’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ, ಯೋಜನೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ವೇಗವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ದೈತ್ಯ ಹೆಜ್ಜೆ ಇಟ್ಟಿದೆ. ಕೇಂದ್ರ ಸಚಿವ ವಿ. ಸೋಮಣ್ಣ (V. Somanna) ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಜಲ ಜೀವನ್ ಮಿಷನ್ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವೆ ಮಹತ್ವದ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.
ರಾಜಸ್ಥಾನದ ನಂತರ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದ ಎರಡನೇ ರಾಜ್ಯವಾಗಿ ಮಧ್ಯಪ್ರದೇಶ ಹೊರಹೊಮ್ಮಿದೆ. ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ನಡೆದಿದೆ.
ಒಪ್ಪಂದದ ಪ್ರಮುಖ ಉದ್ದೇಶಗಳು:
ಪ್ರತಿ ಮನೆಗೂ ಶುದ್ಧ ನೀರು: ಮಧ್ಯಪ್ರದೇಶದ ಪ್ರತಿಯೊಂದು ಗ್ರಾಮೀಣ ಮನೆಗೂ ನಿಗದಿತ ಅವಧಿಯೊಳಗೆ ಶುದ್ಧ ನಲ್ಲಿ ನೀರು ಪೂರೈಕೆಯನ್ನು ಖಚಿತಪಡಿಸುವುದು ಈ ಒಪ್ಪಂದದ ಪ್ರಾಥಮಿಕ ಗುರಿ.
ಪಾರದರ್ಶಕತೆ ಮತ್ತು ಹೊಣೆಗಾರಿಕೆ: ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
ಗುಣಮಟ್ಟದ ಸೇವೆ: ಕೇವಲ ನೀರು ಪೂರೈಕೆಯಷ್ಟೇ ಅಲ್ಲದೆ, ವಿತರಣೆಯ ಗುಣಮಟ್ಟವನ್ನು ಬಲಪಡಿಸಲು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಉತ್ತಮಪಡಿಸಲು ಒತ್ತು ನೀಡಲಾಗಿದೆ.
2028ರ ವೇಳೆಗೆ ‘ಹರ್ ಘರ್ ಜಲ್’ ಗುರಿ:
ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, “ಪ್ರಧಾನಮಂತ್ರಿಯವರ ದೂರದೃಷ್ಟಿಯಂತೆ 2028ರ ವೇಳೆಗೆ ರಾಜ್ಯದ ಪ್ರತಿಯೊಂದು ಮನೆಗೂ ನೀರು ತಲುಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ,” ಎಂದು ತಿಳಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಜಲ ಜೀವನ್ ಮಿಷನ್ ಕೇವಲ ಯೋಜನೆಯಲ್ಲ, ಇದು ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಮಹತ್ತರ ಬದಲಾವಣೆಯಾಗಿದೆ. ಈ ಒಪ್ಪಂದದಿಂದ ಯೋಜನೆಯು ಸಕಾಲದಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.









