ಬೆಂಗಳೂರು: “ಪ್ರತಿಯೊಬ್ಬ ಮಹಿಳೆಯರಲ್ಲಿರುವ ಧೈರ್ಯ ಮತ್ತು ತ್ಯಾಗದ ಶಕ್ತಿ ಸರಿಯಾದ ರೀತಿಯಲ್ಲಿ ಬಳಕೆಯಾದರೆ ಇಡೀ ಜಗತ್ತನ್ನೇ ಬದಲಾಯಿಸಲು ಸಾಧ್ಯ,” ಎಂದು ಐಎಎಸ್ ಅಧಿಕಾರಿ ಹಾಗೂ ಕೆಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ಮಹಿಳಾ ನೌಕರರ ದೂರು ನಿವಾರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಜೀವನದ ಸ್ಫೂರ್ತಿದಾಯಕ ಕಥೆ
ತಮ್ಮ ಯಶಸ್ಸಿನ ಹಿಂದೆ ಇರುವ ಮಹಿಳೆಯರ ತ್ಯಾಗವನ್ನು ಸ್ಮರಿಸಿದ ಅವರು, ತಮ್ಮ ಜೀವನದ ಕೆಲವು ಭಾವುಕ ಕ್ಷಣಗಳನ್ನು ಹಂಚಿಕೊಂಡರು:
ಅಕ್ಕನ ತ್ಯಾಗ: “ನಾನು ಶ್ರೀಮಂತ ಕುಟುಂಬದಿಂದ ಬಂದವನಲ್ಲ. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಅರಿತ ನನ್ನ ಅಕ್ಕ, ತನ್ನ ಸ್ನಾತಕೋತ್ತರ ಪದವಿಯ ಆಸೆಯನ್ನು ಬದಿಗಿಟ್ಟು ನಾನು ಓದಲು ಅವಕಾಶ ಮಾಡಿಕೊಟ್ಟಳು. ಅವಳ ಆ ದಿನದ ತ್ಯಾಗವೇ ಇಂದು ನಾನು ನಿಮ್ಮ ಮುಂದೆ ಐಎಎಸ್ ಅಧಿಕಾರಿಯಾಗಿ ನಿಲ್ಲಲು ಕಾರಣ,” ಎಂದರು.
ಪತ್ನಿಯ ಸಾಧನೆ: “ನನ್ನ ಪತ್ನಿಗೂ ಐಎಎಸ್ ಅಧಿಕಾರಿಯಾಗುವ ಕನಸಿತ್ತು. ಅದು ತಿಳಿಯುತ್ತಿದ್ದಂತೆಯೇ ನಾನು ಅವರಿಗೆ ಬೆಂಬಲ ನೀಡಿದೆ. ಗರ್ಭಿಣಿಯಾಗಿದ್ದಾಗಲೇ ತರಬೇತಿ ಪಡೆದು, ಕಠಿಣ ಪರಿಶ್ರಮದಿಂದ ಅವರು ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ,” ಎಂದು ಹೆಮ್ಮೆಯಿಂದ ನುಡಿದರು.
ಕನಸುಗಳನ್ನು ಬಲಿಕೊಡಬೇಡಿ
ಕುಟುಂಬದ ಒತ್ತಡ ಅಥವಾ ಸಮಸ್ಯೆಗಳ ಕಾರಣಕ್ಕೆ ಮಹಿಳೆಯರು ತಮ್ಮ ಕನಸುಗಳನ್ನು ಕೈಬಿಡಬಾರದು. ಪ್ರತಿಯೊಬ್ಬ ಮಹಿಳೆಯಲ್ಲೂ ಒಂದು ಕನಸಿರುತ್ತದೆ, ಅದನ್ನು ಛಲದಿಂದ ನನಸು ಮಾಡಿಕೊಳ್ಳಲು ಮುಂದಾಗಬೇಕು ಎಂದು ಅವರು ಮಹಿಳಾ ನೌಕರರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಿಗಮದ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು, ಬಿ.ಪಿ. ವಿಜಯ್ (ನಿರ್ದೇಶಕರು), ಡಿ. ಕೋದಂಡಪಾಣಿ (ವ್ಯವಸ್ಥಾಪಕ ನಿರ್ದೇಶಕರು), ಗಿರಿಧರ್ ಕುಲಕರ್ಣಿ (ನಿರ್ದೇಶಕರು – ಯೋಜನೆ), ವಿಶ್ವನಾಥ್ ನಾಯಕ್ (ನಿರ್ದೇಶಕರು – ಕಾರ್ಯಾಚರಣೆ), ಕೆ.ಎನ್. ಗಂಗಾಧರ್ (ನಿರ್ದೇಶಕರು – ಹಣಕಾಸು), ಸಿ. ಸುಜಾತ (ಮಾಜಿ ಅಧ್ಯಕ್ಷರು), ಎಸ್.ಎನ್. ಸುಧಾ (ಮಹಿಳಾ ದೂರು ನಿವಾರಣಾ ಸಮಿತಿ ಅಧ್ಯಕ್ಷೆ),
ಮಹಿಳಾ ಸಬಲೀಕರಣದ ಆಶಯದೊಂದಿಗೆ ನಡೆದ ಈ ಸಮಾರಂಭವು ನಿಗಮದ ಮಹಿಳಾ ನೌಕರರಲ್ಲಿ ಹೊಸ ಚೈತನ್ಯ ತುಂಬಿತು.







