ಮೈಸೂರು: ಪ್ರತಿದಿನ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕ ಮಹಿಳೆಯರು ಇಂದು ಕೈಯಲ್ಲಿ ಕಸಬರಿಗಿಯ ಬದಲು ಬಿಲ್ಲು-ಬಾಣ ಹಿಡಿದು ಗುರಿ ಇಟ್ಟ ದೃಶ್ಯ ಮೈಸೂರಿನಲ್ಲಿ ಕಂಡುಬಂದಿತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವಚ್ಛ ಸರ್ವೇಕ್ಷಣ್-2026ರ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಮತ್ತು ಟೈಗರ್ ಅಡ್ವೆಂಚರ್ ಫೌಂಡೇಶನ್ ಸಹಯೋಗದಲ್ಲಿ ಮಹಿಳಾ ಪೌರಕಾರ್ಮಿಕರಿಗಾಗಿ ವಿಶೇಷ ಬಿಲ್ಲುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉತ್ಸಾಹದ ಚಿಲುಮೆಯಾದ ಪೌರಕಾರ್ಮಿಕರು
ನಗರದ ಸ್ವಚ್ಛತಾ ರಾಯಭಾರಿಗಳಾಗಿರುವ ಸುಮಾರು 40ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರು ಈ ಕ್ರೀಡಾ ತರಬೇತಿಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ದೈನಂದಿನ ಕೆಲಸದ ಒತ್ತಡದ ನಡುವೆ, ಸಾಹಸ ಕ್ರೀಡೆಯೊಂದನ್ನು ಕಲಿಯುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು.
ಗಣ್ಯರಿಂದ ಚಾಲನೆ ಮತ್ತು ಪ್ರೋತ್ಸಾಹ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾದೇಶಿಕ ಆಯುಕ್ತರಾದ ಶ್ರೀ ನಿತೇಶ್ ಪಾಟೀಲ್ ಅವರು ಮಾತನಾಡಿ, “ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಪೌರಕಾರ್ಮಿಕರ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸಲು ಇಂತಹ ತರಬೇತಿಗಳು ಪೂರಕ,” ಎಂದು ಶ್ಲಾಘಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಶೇಖ್ ತನ್ವೀರ್ ಆಸೀಫ್ ಅವರು ಪೌರಕಾರ್ಮಿಕರ ಕೌಶಲವನ್ನು ಕಂಡು ಸಂತಸ ವ್ಯಕ್ತಪಡಿಸಿ, ಅವರ ಸೇವೆಯನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಸಾಧಕಿಯರಿಗೆ ಗೌರವ
ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಪೌರಕಾರ್ಮಿಕ ಸಾಧಕಿಯರಿಗೆ ಕಾರ್ಯಕ್ರಮದ ಅಂತ್ಯದಲ್ಲಿ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಟೈಗರ್ ಅಡ್ವೆಂಚರ್ ಫೌಂಡೇಶನ್ನ ಪದಾಧಿಕಾರಿಗಳು ಶಿಬಿರದ ನೇತೃತ್ವ ವಹಿಸಿದ್ದರು.







