ಮೈಸೂರು (ಮಾರ್ಚ್ 02, 2026): ರಾಜ್ಯದಲ್ಲಿ ಪ್ರಸ್ತುತ ಎಫ್.ಸಿ.ವಿ (FCV) ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಉಂಟಾಗಿರುವ ಬೆಲೆ ಕುಸಿತ ಮತ್ತು ಮಾರುಕಟ್ಟೆ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಮೈಸೂರಿನಲ್ಲಿ ಹೈ-ವೋಲ್ಟೇಜ್ ಸಭೆ ನಡೆಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಜನಪ್ರತಿನಿಧಿಗಳು, ತಂಬಾಕು ಮಂಡಳಿಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಖರೀದಿದಾರರು ಭಾಗವಹಿಸಿದ್ದ ಈ ಸಭೆಯಲ್ಲಿ, ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು.
ಸಭೆಯ ಮುಖ್ಯಾಂಶಗಳು:
ನ್ಯಾಯಯುತ ಬೆಲೆಗೆ ಸೂಚನೆ: ತಂಬಾಕು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರನ್ನು ರಕ್ಷಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಹರಾಜು ಮೈದಾನಗಳಲ್ಲಿ ಪೈಪೋಟಿ ಹೆಚ್ಚಿಸಿ, ಆಂಧ್ರಪ್ರದೇಶದ ಮಾದರಿಯಲ್ಲೇ ಕರ್ನಾಟಕದ ಬೆಳೆಗಾರರಿಗೂ ಉತ್ತಮ ದರ ಸಿಗುವಂತೆ ನೋಡಿಕೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಖರೀದಿದಾರರ ಜತೆ ಚರ್ಚೆ: ಹರಾಜಿನಿಂದ ಹಿಂದೆ ಸರಿಯುತ್ತಿದ್ದ ಖರೀದಿದಾರರ ಮನವೊಲಿಸಿದ ಸಚಿವರು, ರೈತರಿಂದ ಪಾರದರ್ಶಕವಾಗಿ ತಂಬಾಕು ಖರೀದಿ ಮಾಡುವಂತೆ ಮತ್ತು ಕಂಪನಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಂತೆ ಎಚ್ಚರಿಕೆ ನೀಡಿದರು.
ಜಿಎಸ್ ಟಿ (GST) ಹೊರೆ ಇಳಿಕೆ ಭರವಸೆ: ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳದ ಬಗ್ಗೆ ಉದ್ಯಮಿಗಳು ವ್ಯಕ್ತಪಡಿಸಿದ ಆತಂಕವನ್ನು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ಆದರೆ, ಯಾವುದೇ ಕಾರಣಕ್ಕೂ ಇದರ ಹೊರೆ ರೈತರ ಮೇಲೆ ಬೀಳಬಾರದು ಎಂದು ಸ್ಪಷ್ಟಪಡಿಸಿದರು.
ಈ ಬಿಕ್ಕಟ್ಟು ಬಗೆಹರಿಸಲು ಪಕ್ಷಾತೀತವಾಗಿ ನಾಯಕರು ಕೈಜೋಡಿಸಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ರಾಜ್ಯದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ ಸಂಸದ ಸುನೀಲ್ ಬೋಸ್ ಉಪಸ್ಥಿತರಿದ್ದರು.
ಅಲ್ಲದೆ, ತಂಬಾಕು ಬೆಳೆಯುವ ಪ್ರದೇಶಗಳ ಶಾಸಕರಾದ ಎ. ಮಂಜು, ಸಿ.ಎನ್. ಮಂಜೇಗೌಡ, ಜಿ.ಡಿ. ಹರೀಶ್ ಗೌಡ, ಮತ್ತು ವಿವೇಕಾನಂದ ಅವರು ರೈತರ ಪರವಾಗಿ ಧ್ವನಿ ಎತ್ತಿ, ಮಾರುಕಟ್ಟೆಯಲ್ಲಿನ ವ್ಯತ್ಯಯಗಳನ್ನು ಸಭೆಯ ಗಮನಕ್ಕೆ ತಂದರು.







