ಬೆಂಗಳೂರು: ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಅನುಸರಿಸುತ್ತಿರುವ ವಿಳಂಬ ನೀತಿ ಹಾಗೂ ಅವೈಜ್ಞಾನಿಕ ಧೋರಣೆಯನ್ನು ಖಂಡಿಸಿ ಶಾಸಕ ದುರ್ಯೋಧನ ಐಹೊಳೆ ಅವರು ಇಂದು ಗೌರವಾನ್ವಿತ ರಾಜ್ಯಪಾಲರಿಗೆ ಪತ್ರದ ಮೂಲಕ ದೂರು ಸಲ್ಲಿಸಿದರು.
ಸರ್ಕಾರವು ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರದ ನಡೆಯಿಂದ ದಲಿತ ಸಮುದಾಯದ ವಿವಿಧ ಪಂಗಡಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.
ದೂರಿನಲ್ಲಿರುವ ಪ್ರಮುಖ ಅಂಶಗಳು:
ಕಾಲಹರಣದ ಆರೋಪ: ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿ 18 ತಿಂಗಳು ಕಳೆದಿದೆ. ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಈಗಾಗಲೇ ಇದನ್ನು ಜಾರಿಗೊಳಿಸಿವೆ. ಆದರೆ, ಕರ್ನಾಟಕ ಸರ್ಕಾರ ಕೇವಲ ಕಾಲಹರಣ ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಅವೈಜ್ಞಾನಿಕ 6:6:5 ಸೂತ್ರ: ನ್ಯಾ. ನಾಗಮೋಹನ್ ದಾಸ್ ಸಮಿತಿಯ ಶಿಫಾರಸುಗಳನ್ನು ಬದಿಗಿಟ್ಟು, ಸರ್ಕಾರವು ತರಾತುರಿಯಲ್ಲಿ ರೂಪಿಸಿರುವ ‘6:6:5’ ಸೂತ್ರವು ಗೊಂದಲಕಾರಿಯಾಗಿದೆ. ಇದರಿಂದ ಅಲೆಮಾರಿ ಮತ್ತು ಸಣ್ಣ ಜಾತಿಗಳ ಸಮುದಾಯಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೀದಿಗೆ ಬೀಳುವಂತಾಗಿದೆ.
ನೇಮಕಾತಿ ಸ್ಥಗಿತ: ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ರಾಜ್ಯದ ಆರ್ಥಿಕ ದಿವಾಳಿತನದಿಂದಾಗಿ ನೇಮಕಾತಿ ಮಾಡಲಾಗುತ್ತಿಲ್ಲ. ಇದನ್ನು ಮುಚ್ಚಿಹಾಕಲು ಮೀಸಲಾತಿ ಗೊಂದಲ ಸೃಷ್ಟಿಸಿ ಯುವಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸದನದಲ್ಲಿ ಅಸಮಾಧಾನ: ಮಸೂದೆಯನ್ನು ಸದನದಲ್ಲಿ ಸಮರ್ಪಕವಾಗಿ ಚರ್ಚಿಸದೆ, ಕತ್ತಲೆಯಲ್ಲಿ ಅಂಗೀಕರಿಸಿದ ಸರ್ಕಾರದ ಕ್ರಮ ಅಹಂಕಾರದಿಂದ ಕೂಡಿದೆ. ದಲಿತ ಸಂಘಟನೆಗಳ ಮತ್ತು ತಜ್ಞರ ಅಭಿಪ್ರಾಯಕ್ಕೆ ಸರ್ಕಾರ ಬೆಲೆ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಸರ್ಕಾರದ ವಿರುದ್ಧ ಎಚ್ಚರಿಕೆ:
ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದುರ್ಯೋಧನ ಐಹೊಳೆ ಅವರು ಎಚ್ಚರಿಸಿದ್ದಾರೆ. ಕೂಡಲೇ ರಾಜ್ಯಪಾಲರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.







