ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಕಳೀಪುರದಲ್ಲಿ ಇಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರು ಹಮ್ಮಿಕೊಂಡಿದ್ದ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭಾಗವಹಿಸಿ ದೈವದರ್ಶನ ಪಡೆದರು.
ಜನಸಾಗರದ ನಡುವೆ ಹಬ್ಬದ ಸಂಭ್ರಮ
ಪ್ರತಿ ವರ್ಷದಂತೆ ಈ ಬಾರಿಯೂ ಓಕಳೀಪುರದಲ್ಲಿ ಶಿವರಾತ್ರಿ ಮಹೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸಲಾಗಿತ್ತು. ವಿವಿಧ ದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇಡೀ ಪ್ರದೇಶವೇ ಹಬ್ಬದ ಕಳೆಯನ್ನು ತುಂಬಿಕೊಂಡಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಕಾಲ್ನಡಿಗೆಯ ಮೂಲಕ ಪ್ರತಿ ರಸ್ತೆಗೂ ಭೇಟಿ
ಸಚಿವ ದಿನೇಶ್ ಗುಂಡೂರಾವ್ ಅವರು ಓಕಳೀಪುರದ ಪ್ರತಿಯೊಂದು ರಸ್ತೆಯಲ್ಲೂ ಕಾಲ್ನಡಿಗೆಯ ಮೂಲಕ ಸಂಚರಿಸಿ, ಅಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿವಿಧ ದೇವತೆಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಭಕ್ತರೊಂದಿಗೆ ಬೆರೆತು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅನ್ನಸಂತರ್ಪಣೆ: ಹಬ್ಬದ ಪ್ರಯುಕ್ತ ಓಕಳೀಪುರದಾದ್ಯಂತ ವಿವಿಧೆಡೆ ಹಮ್ಮಿಕೊಂಡಿದ್ದ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ವೀಕ್ಷಿಸಿ, ಭಕ್ತರಿಗೆ ಹಂಚಲಾಗುತ್ತಿದ್ದ ಪ್ರಸಾದದ ವ್ಯವಸ್ಥೆಯನ್ನು ಶ್ಲಾಘಿಸಿದರು.
ಸಮಾಜದಲ್ಲಿ ಒಗ್ಗಟ್ಟಿನ ಸಂದೇಶ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಇಂತಹ ಹಬ್ಬಗಳು ಮತ್ತು ಆಚರಣೆಗಳು ಸಮಾಜದಲ್ಲಿ ಪರಸ್ಪರ ಒಗ್ಗಟ್ಟು, ಭಕ್ತಿ ಮತ್ತು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುತ್ತವೆ. ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ರಾಜ್ಯದ ಜನತೆಗೆ ಆರೋಗ್ಯ, ಶಾಂತಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಕೋರಿದ್ದೇನೆ,” ಎಂದು ತಿಳಿಸಿದರು.
ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.







