ಪಿರಿಯಾಪಟ್ಟಣ: “ಜನತಾದಳವು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಇದು ರೈತರ ಮತ್ತು ಸಾಮಾನ್ಯ ಜನರ ಭಾವನೆ. ಮುಂಬರುವ 2028ರ ಚುನಾವಣೆಯಲ್ಲಿ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಬಾವುಟ ಹಾರಿಸುವ ಮೂಲಕ ರಾಜ್ಯದಲ್ಲಿ ಎನ್ಡಿಎ (NDA) ಸರ್ಕಾರ ರಚಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ,” ಎಂದು ಜೆಡಿಎಸ್ ಯುವ ನಾಯಕ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಕರೆ ನೀಡಿದರು.
ಪಟ್ಟಣದ ಶ್ರೀ ಸಾಯಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನರೊಂದಿಗೆ ಜನತಾದಳ’ ಹಾಗೂ ಬೃಹತ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಮಾಜಿ ಸಚಿವ ಶ್ರೀ ಸಾ.ರಾ. ಮಹೇಶ್ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: “ಸಾಲದ ಶೂಲವೇ ಸಾಧನೆಯೇ?”
ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ‘1000 ದಿನಗಳ ಸಾಧನಾ ಸಮಾವೇಶ’ವನ್ನು ತರಾಟೆಗೆ ತೆಗೆದುಕೊಂಡ ನಿಖಿಲ್ ಕುಮಾರಸ್ವಾಮಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಜನರ ಮೇಲೆ ಹೇರಿರುವ ಈ ಸಾಲದ ಶೂಲವೇ ಅವರ ಸಾಧನೆಯೇ?” ಎಂದು ಪ್ರಶ್ನಿಸಿದರು.
ಕುಮಾರಣ್ಣನ ಜನಪರ ಕಾರ್ಯ: ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಾಡಿದ ರೈತರ ಸಾಲಮನ್ನಾ ಯೋಜನೆಯನ್ನು ಜನರಿಗೆ ವಿವರಿಸಿದರು.
ಕೇಂದ್ರದಲ್ಲಿ ಪ್ರಬಲ ಪಾತ್ರ: ಪ್ರಧಾನಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿ ಅವರ ಮೇಲೆ ನಂಬಿಕೆಯಿಟ್ಟು ಕೇಂದ್ರದಲ್ಲಿ ನೀಡಿರುವ ಜವಾಬ್ದಾರಿಯು ನಾಡಿನ ಜನತೆಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಕಾರ್ಯಕರ್ತರೇ ಬೆನ್ನೆಲುಬು
“ಚುನಾವಣೆಯಲ್ಲಿ ಸೋಲು-ಗೆಲುವು ಶಾಶ್ವತವಲ್ಲ. ಜನರು ಮನಸ್ಸು ಮಾಡಿದರೆ ಬದಲಾವಣೆ ಖಚಿತ. ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗೆ ನಿಲ್ಲುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗಟ್ಟಿಯಾಗಿ ಬೆಂಬಲಿಸುತ್ತೇವೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಪ್ರಮುಖ ಜೆಡಿಎಸ್ ನಾಯಕರು ಭಾಗವಹಿಸಿದ್ದರು: ಜಿ.ಡಿ. ಹರೀಶ್ ಗೌಡ (ಶಾಸಕರು), ಕೆ. ಮಹದೇವ್ (ಮಾಜಿ ಶಾಸಕರು), ಅಶ್ವಿನ್ ಕುಮಾರ್ (ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು), ವಿವೇಕಾನಂದ, ಮಂಜೇಗೌಡ (ವಿಧಾನಪರಿಷತ್ ಸದಸ್ಯರು), ಮತ್ತು ತಾಲೂಕು ಅಧ್ಯಕ್ಷರು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು.







