ಬೆಂಗಳೂರು: ನಾಯಂಡಹಳ್ಳಿ ಮತ್ತು ಸುತ್ತಮುತ್ತಲಿನ ಸಾವಿರಾರು ರೈಲು ಪ್ರಯಾಣಿಕರ ದಶಕಗಳ ಕನಸು ಇಂದು ನನಸಾಗಿದೆ. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಅತ್ಯಂತ ಜನಪ್ರಿಯ ನಾಲ್ಕು ಎಕ್ಸ್ಪ್ರೆಸ್ ರೈಲುಗಳಿಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ನೀಡಲಾಗಿದ್ದು, ಇಂದು ಅದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಪ್ರಯಾಣಿಕರ ದಟ್ಟಣೆಗೆ ಮುಕ್ತಿ
ನಾಯಂಡಹಳ್ಳಿ ನಿಲ್ದಾಣವು ಮೆಟ್ರೋ ನಿಲ್ದಾಣ ಮತ್ತು ಕೆಂಗೇರಿ ಉಪನಗರಕ್ಕೆ ಸಮೀಪ ಇರುವುದರಿಂದ, ಇಲ್ಲಿ ರೈಲುಗಳ ನಿಲುಗಡೆಗೆ ಭಾರಿ ಬೇಡಿಕೆಯಿತ್ತು. ಈ ಹೊಸ ಬದಲಾವಣೆಯಿಂದಾಗಿ ಮೈಸೂರು, ಬಾಗಲಕೋಟೆ ಮತ್ತು ಪಂಡರಾಪುರ ಕಡೆಗೆ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.
ನಿಲುಗಡೆ ಆರಂಭವಾದ ರೈಲುಗಳ ವಿವರ:
ಚಾಮುಂಡಿ ಎಕ್ಸ್ಪ್ರೆಸ್: ಮೈಸೂರು – ಕೆಎಸ್ಆರ್ ಬೆಂಗಳೂರು.
ಬಸವ ಎಕ್ಸ್ಪ್ರೆಸ್: ಮೈಸೂರು – ಬಾಗಲಕೋಟೆ.
ಗೋಲ್ ಗುಂಬಜ್ ಎಕ್ಸ್ಪ್ರೆಸ್: ಮೈಸೂರು – ಪಂಡರಾಪುರ.
ಟುಟಿಕೋರಿನ್ ಎಕ್ಸ್ಪ್ರೆಸ್: ಟುಟಿಕೋರಿನ್ – ಮೈಸೂರು.
ಗಣ್ಯರಿಂದ ಹಸಿರು ನಿಶಾನೆ
ಈ ಐತಿಹಾಸಿಕ ಕ್ಷಣಕ್ಕೆ ಶಿವಪ್ಪ ಅವರ ನೇತೃತ್ವದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಮುಖಂಡರು ಸಾಕ್ಷಿಯಾದರು. ರೈಲು ನಿಲ್ದಾಣಕ್ಕೆ ಆಗಮಿಸಿದ ರೈಲುಗಳಿಗೆ ಹೂವಿನ ಹಾರ ಹಾಕಿ, ಸಿಹಿ ಹಂಚುವ ಮೂಲಕ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.







