ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಬಲಪಡಿಸಲು ಮತ್ತು ಪ್ರಯಾಣಿಕರ ದಶಕಗಳ ಬೇಡಿಕೆಯನ್ನು ಈಡೇರಿಸಲು ಸಂಸದರಾದ ಜಗದೀಶ್ ಶೆಟ್ಟರ್ ಅವರು ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿ ಪ್ರಮುಖ ಪ್ರಸ್ತಾವನೆಗಳನ್ನು ಸಲ್ಲಿಸಿದರು.
1. ಎಂಟನೇ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆಗೆ ಪ್ರಸ್ತಾವನೆ
2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಏಳು ನಗರಗಳಿಗೆ ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಲಾಗಿದೆ. ಈ ಯೋಜನೆಯಡಿ ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ 8ನೇ ಹೈಸ್ಪೀಡ್ ಕಾರಿಡಾರ್ ಘೋಷಿಸುವಂತೆ ಶೆಟ್ಟರ್ ಒತ್ತಾಯಿಸಿದರು.
ಪ್ರಯೋಜನ: ಈ ಮಾರ್ಗವು ಘೋಷಣೆಯಾದಲ್ಲಿ ಉತ್ತರ ಕರ್ನಾಟಕದ ಸಣ್ಣ ಮತ್ತು ಮಧ್ಯಮ ನಗರಗಳ ಕೈಗಾರಿಕಾ ಹಾಗೂ ಆರ್ಥಿಕ ಅಭಿವೃದ್ಧಿಗೆ ದೊಡ್ಡ ವೇಗ ಸಿಗಲಿದೆ.
2. ನೂತನ ರೈಲು ಮಾರ್ಗಗಳ ನಿರ್ಮಾಣ
ಬೆಳಗಾವಿ – ಬಾಗಲಕೋಟೆ ಸಂಪರ್ಕ: ಪರಕನಟ್ಟಿ, ಗೋಕಾಕ ಶಹರ ಮತ್ತು ಯಾದವಾಡ ಮಾರ್ಗವಾಗಿ ಬಾಗಲಕೋಟೆಗೆ ನೂತನ ರೈಲು ಮಾರ್ಗ ನಿರ್ಮಿಸುವಂತೆ ಕೋರಿದರು. ಈ ಭಾಗದಲ್ಲಿ ಈಗಾಗಲೇ ಹಲವಾರು ಸಿಮೆಂಟ್ ಮತ್ತು ಸಕ್ಕರೆ ಕಾರ್ಖಾನೆಗಳಿದ್ದು, ರೈಲು ಸಂಪರ್ಕದಿಂದ ಸರಕು ಸಾಗಣೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಲೋಕಾಪೂರ – ಧಾರವಾಡ ಮಾರ್ಗ: ರೈಲ್ವೆ ಮಂಡಳಿ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ಶೆಟ್ಟರ್, ಲೋಕಾಪೂರ – ರಾಮದುರ್ಗ – ಸವದತ್ತಿ – ಧಾರವಾಡ ನಡುವೆ ನೂತನ ಮಾರ್ಗದ ‘ಪೂರ್ವ ಸಮೀಕ್ಷಾ’ ಕಾರ್ಯಕ್ಕೆ ಅನುಮೋದನೆ ನೀಡುವಂತೆ ಕೋರಿದರು.
3. ವಂದೇ ಭಾರತ ರೈಲು ಸಮಯ ಬದಲಾವಣೆ
ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸದ್ಯ ಬೆಳಿಗ್ಗೆ 05:35ಕ್ಕೆ ಹೊರಡುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಸಮಯವನ್ನು ಬೆಳಿಗ್ಗೆ 06:15ಕ್ಕೆ ಬದಲಾಯಿಸುವಂತೆ ಸಚಿವರಿಗೆ ತಿಳಿಸಲಾಯಿತು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
4. ರದ್ದಾದ ರೈಲುಗಳ ಪುನಾರಂಭ
ಬೆಳಗಾವಿ – ಮಣಗೂರ ನಡುವೆ ಈ ಹಿಂದೆ ಸಂಚರಿಸುತ್ತಿದ್ದ, ಆದರೆ ಈಗ ರದ್ದಾಗಿರುವ ರೈಲು ಸೇವೆಯನ್ನು ಕೂಡಲೇ ಪುನಾರಂಭಿಸಿ ಬೆಳಗಾವಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ರೈಲ್ವೆ ಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.







