ಬೆಂಗಳೂರು: 2026-27ನೇ ಸಾಲಿನ ರಾಜ್ಯ ಆಯವ್ಯಯದ (Budget) ಹಿನ್ನೆಲೆಯಲ್ಲಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಬೇಕಾದ ಹೊಸ ಯೋಜನೆಗಳು ಹಾಗೂ ಆದ್ಯತೆಗಳ ಕುರಿತು ಮಾನ್ಯ ಸಚಿವರಾದ ಡಾ. ಶರಣ ಪ್ರಕಾಶ ಆರ್ ಪಾಟೀಲ್ ಅವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಬಜೆಟ್ನಲ್ಲಿ ಇಲಾಖೆಗೆ ನಿಗದಿಪಡಿಸಬೇಕಾದ ಅನುದಾನ, ಯುವಜನರಿಗೆ ಉದ್ಯೋಗಾವಕಾಶ ಒದಗಿಸುವ ಹೊಸ ಕಾರ್ಯಕ್ರಮಗಳು ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವ ದೃಷ್ಟಿಯಿಂದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಉದ್ಯೋಗಾಧಾರಿತ ಕೌಶಲ್ಯ: ರಾಜ್ಯದ ಯುವಜನರಿಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳ ರೂಪರೇಷೆ ಸಿದ್ಧಪಡಿಸಲಾಯಿತು.
ಜೀವನೋಪಾಯ ಅಭಿವೃದ್ಧಿ: ಸ್ತ್ರೀಶಕ್ತಿ ಸಂಘಗಳು ಮತ್ತು ಗ್ರಾಮೀಣ ಉದ್ದಿಮೆದಾರರಿಗೆ ಜೀವನೋಪಾಯ ಒದಗಿಸುವ ಹಾಗೂ ಸಣ್ಣ ಪ್ರಮಾಣದ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಕುರಿತು ಚರ್ಚಿಸಲಾಯಿತು.
ಅನುದಾನ ಬಳಕೆ: ಪ್ರಸಕ್ತ ಸಾಲಿನ ಅನುದಾನದ ಬಳಕೆ ಹಾಗೂ ಮುಂಬರುವ ಸಾಲಿನಲ್ಲಿ ಅಗತ್ಯವಿರುವ ಹಣಕಾಸು ನೆರವಿನ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಲಾಯಿತು.
ಮನೋಜ್ ಕುಮಾರ್ ಮೀನಾ, ಸರ್ಕಾರದ ಕಾರ್ಯದರ್ಶಿಗಳು. ಶ್ರೀಮತಿ ಸ್ನೇಹಲ್ ಆರ್, ಮಾನ್ಯ ಅಭಿಯಾನ ನಿರ್ದೇಶಕರು. ಶ್ರೀಮತಿ ಅನ್ನಪೂರ್ಣ ಕೆ, ಮುಖ್ಯ ಕಾರ್ಯಾಚರಣಾ ಅಧಿಕಾರಿಗಳು (ಕಾ). ಶ್ರೀಮತಿ ಕಾತ್ಯಾಯಿನಿದೇವಿ, ಮುಖ್ಯ ಕಾರ್ಯಾಚರಣಾ ಅಧಿಕಾರಿಗಳು (ಕೌ). ಶ್ರೀನಿವಾಸ್ ಎಂ, ಅಪರ ಅಭಿಯಾನ ನಿರ್ದೇಶಕರು. ಶ್ರೀಮತಿ ರಾಗವಿ ವಿ ನಾಯಕ, ಯೋಜನಾಧಿಕಾರಿಗಳು ಹಾಗೂ ಇಲಾಖೆಯ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ಬಜೆಟ್ನಲ್ಲಿ ಯುವಜನತೆ ಮತ್ತು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಆರ್ಥಿಕತೆಗೆ ಬಲ ತುಂಬಲು ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.







