ಬೆಂಗಳೂರು: ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಅವರನ್ನು ಕೇವಲ ಉತ್ಪಾದಕರಿಗಿಂತ ಹೆಚ್ಚಾಗಿ ‘ಉದ್ಯಮಿಗಳನ್ನಾಗಿ’ ರೂಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ಹೆಜ್ಜೆ ಇಟ್ಟಿದೆ. ಈ ಉದ್ದೇಶದೊಂದಿಗೆ ಫೆಬ್ರವರಿ 6 ರಿಂದ 8 ರವರೆಗೆ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ – 2026 (ITF-2026) ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಶ್ರೀ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು “ಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣ” (Agriculture Beyond Production – Farmers Empowerment) ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೇಳದ ಪ್ರಮುಖ ವೈಶಿಷ್ಟ್ಯಗಳು:
ವಿನೂತನ ಧ್ಯೇಯವಾಕ್ಯ: ಈ ವರ್ಷ “ಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣ” ಎಂಬ ಧ್ಯೇಯದೊಂದಿಗೆ ಮೇಳ ನಡೆಯಲಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೂರು ಉಪ ಧ್ಯೇಯಗಳು: ಸಂಸ್ಕರಣೆ ಮತ್ತು ಮೌಲ್ಯವರ್ಧನೆ (Value Addition), ಕೃಷಿ ಪರಿಸರ ವಿಜ್ಞಾನ (Agro-Ecology) ಹಾಗೂ ಬ್ರ್ಯಾಂಡಿಂಗ್ ಎಂಬ ಮೂರು ಪ್ರಮುಖ ಅಂಶಗಳ ಮೇಲೆ ಮೇಳ ಗಮನಹರಿಸಲಿದೆ.
ಆದಾಯ ವೃದ್ಧಿಗೆ ಕ್ರಮ: ರೈತರಿಗೆ ನಿರಂತರ ಆದಾಯ ದೊರಕಿಸುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ ಮತ್ತು ಭೌಗೋಳಿಕ ಸೂಚ್ಯಂಕವಿರುವ (GI-Tag) ಉತ್ಪನ್ನಗಳ ಪ್ರಚಾರಕ್ಕೆ ಸರ್ಕಾರ ವ್ಯಾಪಕ ಕ್ರಮ ಕೈಗೊಂಡಿದೆ.
ಕಳೆದ ವರ್ಷದ ಯಶಸ್ಸು:
ಕಳೆದ ವರ್ಷ ನಡೆದ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಯಶಸ್ವಿಗೊಳಿಸಿದ್ದನ್ನು ಸ್ಮರಿಸಿದ ಸಚಿವರು, ಈ ಬಾರಿಯ ITF-2026 ಕೂಡ ರೈತರು ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ GI-Z ಇಂಡಿಯಾದ ಟೀಂ ಲೀಡರ್ ಹನ್ಸ್ ಜುರ್ಗೆನ್ ಕ್ಲೆನ್, ಪ್ರಾಜೆಕ್ಟ್ ಮ್ಯಾನೇಜರ್ ನಮ್ರತಾ ಶರ್ಮಾ, ಕೃಷಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ. ಪುತ್ರ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ. ಸಿಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







