ನವದೆಹಲಿ: ದೇಶದ ಸಾರಿಗೆ ಮತ್ತು ಮೂಲಸೌಕರ್ಯ ವಲಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026, ಬಜೆಟ್ನಲ್ಲಿ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಘೋಷಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ದೊಡ್ಡ ಮಟ್ಟದ ಲಾಭವಾಗಲಿದ್ದು, ದಕ್ಷಿಣ ಭಾರತದ ಆರ್ಥಿಕ ಚಿತ್ರಣವೇ ಬದಲಾಗುವ ನಿರೀಕ್ಷೆಯಿದೆ.
ಬೆಂಗಳೂರಿಗೆ ದ್ವಿಪಥದ ವೇಗ
ಬಜೆಟ್ನಲ್ಲಿ ಘೋಷಿಸಲಾದ 7 ಕಾರಿಡಾರ್ಗಳಲ್ಲಿ ಎರಡು ಪ್ರಮುಖ ಮಾರ್ಗಗಳು ಬೆಂಗಳೂರನ್ನು ಸಂಪರ್ಕಿಸಲಿವೆ:
- ಬೆಂಗಳೂರು – ಚೆನ್ನೈ ಕಾರಿಡಾರ್: ಈ ಮಾರ್ಗ ಜಾರಿಯಾದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 1 ಗಂಟೆ 13 ನಿಮಿಷಕ್ಕೆ ಇಳಿಕೆಯಾಗಲಿದೆ.
- ಹೈದರಾಬಾದ್ – ಬೆಂಗಳೂರು ಕಾರಿಡಾರ್: ಐಟಿ ಹಬ್ಗಳಾದ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪ್ರಯಾಣವು ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ.
ದಕ್ಷಿಣದ ‘ಹೈಸ್ಪೀಡ್ ಟ್ರಯಾಂಗಲ್’
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿರುವಂತೆ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳು ಈ ಯೋಜನೆಯ ಮೂಲಕ ‘ಸೌತ್ ಹೈಸ್ಪೀಡ್ ಟ್ರಯಾಂಗಲ್’ (ದಕ್ಷಿಣದ ಹೈಸ್ಪೀಡ್ ತ್ರಿಕೋನ) ಆಗಿ ರೂಪುಗೊಳ್ಳಲಿವೆ. ಇದು ಐಟಿ, ಉತ್ಪಾದನಾ ವಲಯ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ.
ಘೋಷಿತ ಏಳು ಹೈಸ್ಪೀಡ್ ಕಾರಿಡಾರ್ಗಳ ಪಟ್ಟಿ:
- ಮುಂಬೈ – ಪುಣೆ
- ಪುಣೆ – ಹೈದರಾಬಾದ್
- ಹೈದರಾಬಾದ್ – ಬೆಂಗಳೂರು
- ಹೈದರಾಬಾದ್ – ಚೆನ್ನೈ
- ಚೆನ್ನೈ – ಬೆಂಗಳೂರು
- ದೆಹಲಿ – ವಾರಣಾಸಿ
- ವಾರಣಾಸಿ – ಸಿಲಿಗುರಿ
ಆರ್ಥಿಕ ಮತ್ತು ಸುಸ್ಥಿರ ಬೆಳವಣಿಗೆ
ಈ ಕಾರಿಡಾರ್ಗಳನ್ನು “ಗ್ರೋತ್ ಕನೆಕ್ಟರ್ಸ್” (ಬೆಳವಣಿಗೆಯ ಸಂಪರ್ಕ ಕೊಂಡಿಗಳು) ಎಂದು ಬಣ್ಣಿಸಿರುವ ಸಚಿವರು, ಇವು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಪ್ರಾದೇಶಿಕ ಆರ್ಥಿಕ ಏಕೀಕರಣ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲಿವೆ ಎಂದು ತಿಳಿಸಿದ್ದಾರೆ. ಕರ್ನಾಟಕದ ಕಲ್ಯಾಣ ಕರ್ನಾಟಕ ಭಾಗವು ಹೈದರಾಬಾದ್-ಪುಣೆ ಮಾರ್ಗದಿಂದ ಪರೋಕ್ಷವಾಗಿ ಪ್ರಯೋಜನ ಪಡೆಯಲಿದ್ದು, ಇಡೀ ರಾಜ್ಯದ ಮೂಲಸೌಕರ್ಯ ವೇಗಕ್ಕೆ ಈ ಬಜೆಟ್ ಹೊಸ ಮುನ್ನುಡಿ ಬರೆದಿದೆ.









