ಬೆಂಗಳೂರು: “ಬ್ಯಾರಿ ಸಮುದಾಯದವರು ಎಲ್ಲೇ ಇರಲಿ, ಯಾರೇ ವಿಭಜಿಸಲು ಪ್ರಯತ್ನಿಸಿದರೂ ತಮ್ಮ ಅಸ್ಮಿತೆ ಮತ್ತು ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕು. ಜಾತ್ಯತೀತ ಮನೋಭಾವದ ಬ್ಯಾರಿಗಳು ಎಲ್ಲರೊಂದಿಗೆ ಬೆರೆತು ಬಾಳುತ್ತಿರುವುದು ದೊಡ್ಡ ವಿಚಾರ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್ನಲ್ಲಿ ಇಂದು ಬ್ಯಾರಿಸ್ ಸೆಂಟ್ರಲ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ “ಬ್ಯಾರಿ ಕೂಟ-2026” ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಪ್ರೇಮ ಮತ್ತು ಅಸ್ಮಿತೆ: ಬ್ಯಾರಿ ಮತ್ತು ತುಳು ಭಾಷೆಗಳಿಗೆ ಸ್ವಂತ ಲಿಪಿ ಇಲ್ಲದಿದ್ದರೂ, ಕನ್ನಡ ಲಿಪಿಯ ಮೂಲಕವೇ ತಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವುದು ಪ್ರಶಂಸನೀಯ. ಬ್ಯಾರಿಗಳು ಉದ್ಯೋಗಕ್ಕಾಗಿ ದೇಶ-ವಿದೇಶಗಳಲ್ಲಿದ್ದರೂ ತಮ್ಮ ಮೂಲ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಭ್ಯಾಸ ಮತ್ತು ಲಿಂಗ ಸಮಾನತೆ: ಒಂದು ಕಾಲದಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಬ್ಯಾರಿ ಸಮುದಾಯದ ಹೆಣ್ಣುಮಕ್ಕಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಸ್ವಾಗತಾರ್ಹ. ಲಿಂಗ ತಾರತಮ್ಯ ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಅಸ್ತ್ರ ಎಂದರು.
ಜಾತ್ಯತೀತತೆ: ಬ್ಯಾರಿಗಳು ಮೂಲತಃ ವ್ಯಾಪಾರಿಗಳಾಗಿದ್ದರೂ ಸಮಾಜದಲ್ಲಿ ಎಲ್ಲ ಸಮುದಾಯಗಳೊಂದಿಗೆ ಹೊಂದಿಕೊಂಡು ಬಾಳುತ್ತಿದ್ದಾರೆ. ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸದೆ, ಮನುಷ್ಯತ್ವವನ್ನು ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರದ ನೆರವು: ಬ್ಯಾರಿ ಭವನ ನಿರ್ಮಾಣಕ್ಕೆ ಈಗಾಗಲೇ 5 ಕೋಟಿ ರೂ. ನೀಡಲಾಗಿದ್ದು, ಮಂಗಳೂರು ಬ್ಯಾರಿ ಅಕಾಡೆಮಿಗೆ 3 ಕೋಟಿ ರೂ. ಹಾಗೂ ಹಜ್ ಭವನಕ್ಕೆ 10 ಕೋಟಿ ರೂ. ಅನುದಾನ ನೀಡಲಾಗಿದೆ. ಬ್ಯಾರಿ ಕಲೆ ಮತ್ತು ಭಾಷೆಯ ಉಳಿವಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.
ಯು.ಟಿ. ಖಾದರ್ ಕಾರ್ಯವೈಖರಿಗೆ ಶ್ಲಾಘನೆ:
ಬ್ಯಾರಿ ಸಮುದಾಯದ ಹೆಮ್ಮೆಯ ನಾಯಕ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಸಮುದಾಯವು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮತ್ತಷ್ಟು ಸಬಲರಾಗಲಿ ಎಂದು ಸಿಎಂ ಹಾರೈಸಿದರು.
ಈ ಬಾರಿಯ ಬ್ಯಾರಿ ಕೂಟದಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಮಾಜ ಸೇವೆಗಾಗಿ ಆ್ಯಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ಕರಾವಳಿಯ ವಿಶಿಷ್ಟ ಆಹಾರ ಮಳಿಗೆಗಳು ಮತ್ತು ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರುಗಳು, ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಬ್ಯಾರಿ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.







