ಬಾದಾಮಿ: “ಕನ್ನಡ ನೆಲದ ಹೆಮ್ಮೆಯಾದ ಚಾಲುಕ್ಯ ಸಾಮ್ರಾಜ್ಯದ ವೈಭವವನ್ನು ಮರುಕಳಿಸುವ ಉದ್ದೇಶದಿಂದ ಈ ಬಾರಿ ಬಜೆಟ್ನಲ್ಲಿಯೇ ಘೋಷಿಸಿದಂತೆ ‘ಚಾಲುಕ್ಯ ಉತ್ಸವ-2026’ ಅನ್ನು ಆಯೋಜಿಸಲಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ “ಚಾಲುಕ್ಯ ಉತ್ಸವ-2026” ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಭಾಷಣದ ಪ್ರಮುಖಾಂಶಗಳು:
ಬಾದಾಮಿ ಜನರ ಋಣ ಮರೆಯಲಾರೆ: “2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನನುಭವಿಸಿದಾಗ ಬಾದಾಮಿಯ ಜನರು ನನ್ನನ್ನು ಕೈಹಿಡಿದು ವಿಧಾನಸಭೆಗೆ ಕಳುಹಿಸಿದರು. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದಲೇ ಇಂದು ನಾನು ವರುಣಾ ಕ್ಷೇತ್ರದಲ್ಲಿ ಗೆದ್ದು ಪುನಃ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಬಾದಾಮಿ ಜನರ ಉಪಕಾರವನ್ನು ನಾನೆಂದಿಗೂ ಮರೆಯಲಾರೆ,” ಎಂದು ಸಿಎಂ ಭಾವುಕರಾದರು.
ಅಭಿವೃದ್ಧಿ ಯೋಜನೆಗಳ ಮಹಾಪೂರ: ಕಳೆದ ಎರಡು ವರ್ಷಗಳಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು 2,000 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ:
₹1,400 ಕೋಟಿ: ಏತನೀರಾವರಿ ಯೋಜನೆಗೆ.
₹400 ಕೋಟಿ: ಕುಡಿಯುವ ನೀರಿನ ಯೋಜನೆಗೆ.
₹50 ಕೋಟಿ: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.
ಚಾಲುಕ್ಯ ಉತ್ಸವಕ್ಕೆ ಹೆಚ್ಚುವರಿ ಅನುದಾನ: ಉತ್ಸವಕ್ಕಾಗಿ ಈಗಾಗಲೇ ಬಜೆಟ್ನಲ್ಲಿ 3 ಕೋಟಿ ರೂ. ಮೀಸಲಿಡಲಾಗಿತ್ತು. ಸ್ಥಳೀಯ ಶಾಸಕರ ಒತ್ತಾಸೆಯ ಮೇರೆಗೆ ಹೆಚ್ಚುವರಿಯಾಗಿ 1 ಕೋಟಿ ರೂ. ನೀಡುವುದಾಗಿ ಸಿಎಂ ಸ್ಥಳದಲ್ಲೇ ಘೋಷಿಸಿದರು.
ಇಮ್ಮಡಿ ಪುಲಕೇಶಿ ಪ್ರತಿಮೆ: ಇಮ್ಮಡಿ ಪುಲಕೇಶಿಯವರ ಭವ್ಯ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಪ್ರತಿಮೆ ಅನಾವರಣಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕೇಂದ್ರಕ್ಕೆ ಟಾಂಗ್: “ಕೇಂದ್ರ ಸರ್ಕಾರ ರಾಜ್ಯದ ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ನಾವು ಸುಮ್ಮನಿದ್ದೆವು. ಈಗ ಸಂಸದರು ನೆರವು ಕೊಡಿಸುವುದಾಗಿ ಹೇಳಿದ್ದಾರೆ, ನಾಳೆಯೇ ಅವರಿಗೆ ಮನವಿ ಪತ್ರ ನೀಡಲಾಗುವುದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲನ್ನು ಕೊಡಿಸಲು ಬಿಜೆಪಿ ಸಂಸದರು ಪ್ರಯತ್ನಿಸಲಿ,” ಎಂದು ಕಿವಿಮಾತು ಹೇಳಿದರು.
“ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಚಾಲುಕ್ಯರ ಆಡಳಿತದಂತೆ ನಾವು ಸರ್ವಧರ್ಮ ಸಮನ್ವಯತೆಯನ್ನು ಪಾಲಿಸುತ್ತಿದ್ದೇವೆ.” – ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಸುರೇಶ್, ಆರ್.ಬಿ. ತಿಮ್ಮಾಪುರ, ಶಾಸಕ ಭೀಮಸೇನ್ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.







