ಮುಗಳಖೋಡ (ರಾಯಬಾಗ): “ಹಸಿದ ಭಕ್ತರಿಗೆ ಅನ್ನಪೂರ್ಣೇಶ್ವರಿಯಾಗಿ, ವಿದ್ಯೆ ಬಯಸಿ ಬಂದವರಿಗೆ ಸರಸ್ವತಿಯಾಗಿ ಹಾಗೂ ನೊಂದು ಬಂದವರಿಗೆ ತಾಯಿಯಾಗಿ ಅನುಗ್ರಹಿಸಿದ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಸೇವಾ ಕಾರ್ಯ ನಮ್ಮೆಲ್ಲರಿಗೂ ಸ್ಫೂರ್ತಿ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 40ನೇ ಪುಣ್ಯಸ್ಮರಣೆ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಗದ್ದುಗೆ ದರ್ಶನ ಮತ್ತು ಸಾನ್ನಿಧ್ಯ
ಮಠದ ಪರಮಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಪುಣ್ಯಾರಾಧನೆ ಜರುಗಿತು. ಬಿ.ವೈ. ವಿಜಯೇಂದ್ರ ಅವರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ಪೂಜ್ಯ ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ಭಾವೈಕತೆಯ ಶಕ್ತಿ ಪೀಠ
ಮುಗಳಖೋಡ-ಜಿಡಗಾ ಮಠದ ಪರಂಪರೆಯನ್ನು ಸ್ಮರಿಸಿದ ನಾಯಕರು, “ಐದು ರಾಜ್ಯಗಳ ಲಕ್ಷಾಂತರ ಭಕ್ತರ ಶ್ರದ್ಧೆಯ ಕೇಂದ್ರವಾಗಿರುವ ಈ ಮಠವು ತನ್ನ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದೆ. 7 ಕೋಟಿ ಜಪದ ಸದ್ಭಕ್ತರ ಭದ್ರಕೋಟೆಯಾಗಿರುವ ಈ ಪರಂಪರೆಯು ಭಾವೈಕತೆಯ ಸಂಕೇತವಾಗಿದೆ,” ಎಂದು ಬಣ್ಣಿಸಿದರು.
ಪುಣ್ಯಸ್ಮರಣೆಯ ಈ ಮಹೋನ್ನತ ಕಾರ್ಯಕ್ರಮದಲ್ಲಿ ನಾಡಿನ ಹಲವು ಪ್ರಮುಖರು ಉಪಸ್ಥಿತರಿದ್ದರು: ಶಶಿಕಲಾ ಜೊಲ್ಲೆ: ಶಾಸಕರು ಮತ್ತು ಮಾಜಿ ಸಚಿವರು, ರಮೇಶ್ ಕತ್ತಿ ಮತ್ತು ಅಣ್ಣ ಸಾಹೇಬ ಜೊಲ್ಲೆ: ಮಾಜಿ ಸಂಸದರು, ಪಿ. ರಾಜೀವ್: ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ದೊಡ್ಡನಗೌಡ ಪಾಟೀಲ್: ಮಾಜಿ ಶಾಸಕರು, ಸತೀಶ್ ಅಪ್ಪಾಜಿಗೋಳ್ ಹಾಗೂ ಸುಭಾಷ್ ಪಾಟೀಲ್: ಜಿಲ್ಲಾಧ್ಯಕ್ಷರು (ಚಿಕ್ಕೋಡಿ ಮತ್ತು ಬೆಳಗಾವಿ ಗ್ರಾಮಾಂತರ), ಮುಖಂಡರಾದ ವಿಜುಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಜನೆವರಿ 16ರಂದು ಮಠದ ಶಿಖರದ ಮೇಲೆ ಪೂಜ್ಯ ಶ್ರೀಗಳಿಂದ ಪುಷ್ಪಾರ್ಚನೆ ನಡೆಯುವ ಮೂಲಕ ಈ ಸಂಭ್ರಮಕ್ಕೆ ತೆರೆ ಬೀಳಲಿದೆ. ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ದಾಸೋಹ ಹಾಗೂ ದರ್ಶನ ಪಡೆದರು. ಇಡೀ ಮುಗಳಖೋಡ ಪಟ್ಟಣವು ಭಕ್ತರ ಸಾಗರದಿಂದ ಕಂಗೊಳಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.







