ಬೀದರ್: ಭಾಲ್ಕಿಯ ಹಿರೇಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಜನೆವರಿ 24, 25 ಮತ್ತು 26 ರಂದು ಬೀದರ್ ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ರಾಜ್ಯ ಮಟ್ಟದ ‘ವೀರಲೋಕ ಪುಸ್ತಕ ಸಂತೆ’ ಆಯೋಜಿಸಲಾಗಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಪುಸ್ತಕ ಸಂತೆಯ ಅಧಿಕೃತ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜ್ಞಾನದ ದಾಸೋಹಕ್ಕೆ ಪುಸ್ತಕ ಸಂತೆ ವೇದಿಕೆ
“ಬೀದರ್ ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಓದುಗರಿಗೆ ಒಂದೇ ಸೂರಿನಡಿ ಲಕ್ಷಾಂತರ ಪುಸ್ತಕಗಳನ್ನು ಲಭ್ಯವಾಗಿಸಲು ಈ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಜ್ಞಾನದ ಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರಕಾಶಕರು ಮತ್ತು ಸಾಹಿತ್ಯ ಪ್ರೇಮಿಗಳು ಆಗಮಿಸಲಿದ್ದಾರೆ,” ಎಂದು ಸಚಿವರು ವಿವರಿಸಿದರು.
ಧಾರ್ಮಿಕ ಹಾಗೂ ರಾಜಕೀಯ ಗಣ್ಯರ ಸಾಥ್
ಪತ್ರಿಕಾಗೋಷ್ಠಿಯಲ್ಲಿ ಭಾಲ್ಕಿ ಹಿರೇಮಠದ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಪುಸ್ತಕ ಸಂತೆಯಂತಹ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ಓದಿನ ಹವ್ಯಾಸ ಬೆಳೆಸಲು ಪೂರಕವಾಗಿವೆ ಎಂದು ಪೂಜ್ಯರು ಅಭಿಪ್ರಾಯಪಟ್ಟರು.
ಡಾ. ಚಂದ್ರಶೇಖರ ಪಾಟೀಲ: ವಿಧಾನ ಪರಿಷತ್ ಸದಸ್ಯರು, ಶ್ರೀ ಭೀಮರಾವ ಪಾಟೀಲ: ವಿಧಾನ ಪರಿಷತ್ ಸದಸ್ಯರು, ಶ್ರೀ ಸುರೇಶ ಚನ್ನಶೆಟ್ಟಿ: ಜಿಲ್ಲಾಧ್ಯಕ್ಷರು, ಕಸಾಪ ಬೀದರ್, ಶ್ರೀ ಶಿವಶಂಕರ ಟೋಕರೆ: ಕೋಶಾಧ್ಯಕ್ಷರು, ಕಸಾಪ, ಶ್ರೀ ವೀರಪಾಕ್ಷ ಗಾದಗಿ: ವೀರಲೋಕದ, ಮುಖ್ಯಸ್ಥರು ಹಾಗೂ ಯುವ ಉತ್ಸಾಹಿಗಳು ಉಪಸ್ಥಿತರಿದ್ದ ಪ್ರಮುಖರು
ಬೀದರ್ ಜಿಲ್ಲೆಯ ಸಾಹಿತ್ಯ ಇತಿಹಾಸದಲ್ಲಿ ಈ ಪುಸ್ತಕ ಸಂತೆ ಹೊಸ ಮೈಲಿಗಲ್ಲಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.







