ಜೇವರ್ಗಿ: “ವಿಶ್ವಗುರು ಬಸವಣ್ಣನವರಿಂದಲೇ ‘ಕುಲಕ್ಕೆ ತಿಲಕ’ ಎಂದು ಸ್ತುತಿಸಲ್ಪಟ್ಟ ಶಿವಶರಣ ಮಾದಾರ ಚೆನ್ನಯ್ಯನವರ ಸಮಾನತೆಯ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಶಾಸಕ ಶ್ರೀ ಅರುಣ್ಕುಮಾರ್ ಎಂ.ವೈ. ಪಾಟೀಲ್ ಅವರು ತಿಳಿಸಿದರು.
ಪಟ್ಟಣದ ಎಪಿಎಂಸಿ (APMC) ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀ ಶ್ರೀ ಶ್ರೀ ಶಿವಶರಣ ಮಾದಾರ ಚೆನ್ನಯ್ಯನವರ 975ನೇ ಜಯಂತಿ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಾದಿಗರ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣ್ಯರಿಂದ ಉದ್ಘಾಟನೆ:
ಈ ಐತಿಹಾಸಿಕ ಕಾರ್ಯಕ್ರಮವನ್ನು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಕೆ.ಹೆಚ್. ಮುನಿಯಪ್ಪ, ಅಬಕಾರಿ ಸಚಿವ ಶ್ರೀ ಆರ್.ಬಿ. ತಿಮ್ಮಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಧರಂ ಸಿಂಗ್ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಅವರು ಜಂಟಿಯಾಗಿ ಉದ್ಘಾಟಿಸಿದರು.
ಶರಣರ ತತ್ವ ಆದರ್ಶಗಳ ಸ್ಮರಣೆ:
ಕಾರ್ಯಕ್ರಮದ ಕುರಿತು ಮಾತನಾಡಿದ ಅರುಣ್ಕುಮಾರ್ ಪಾಟೀಲ್ ಅವರು, “ಮಾದಾರ ಚೆನ್ನಯ್ಯನವರು ಕೇವಲ ಒಬ್ಬ ಶರಣರಲ್ಲ, ಅವರು ಶ್ರೇಷ್ಠ ವಚನಕಾರರು. ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಅವರ ವಚನಗಳು ಸಾಮಾಜಿಕ ಏಕತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಶಕ್ತಿಯಾಗಿವೆ. ಕುಲ-ವರ್ಗದ ಭೇದವಿಲ್ಲದ ಸಮಾನತೆಯ ಸಮಾಜದ ಕನಸು ಕಂಡ ಅವರ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದರು.
ದಿವ್ಯ ಸಾನಿಧ್ಯ:
ಸಮಾವೇಶದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚಿತ್ರದುರ್ಗದ ಶ್ರೀ ಶಿವಶರಣ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಹಾಗೂ ಹರಳಯ್ಯ ಪೀಠದ ಬಸವ ಹರಳಯ್ಯ ಮಹಾಸ್ವಾಮೀಜಿಯವರು ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜೇವರ್ಗಿಯ ಪ್ರಮುಖ ಮುಖಂಡರಾದ ರಾಜಶೇಖರ್ ಸೀರಿ, ಆಂದೋಲದ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಸೇರಿದಂತೆ ಅನೇಕ ಗಣ್ಯರು, ಸಮಾಜದ ಬಂಧುಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಜೇವರ್ಗಿ ಪಟ್ಟಣವು ಇಂದು ಶರಣರ ತತ್ವ ಘೋಷಣೆಗಳು ಹಾಗೂ ಜನಸಾಗರದಿಂದ ಕಳೆಗಟ್ಟಿತ್ತು.







