ನಂಜನಗೂಡು: ಪಟ್ಟಣದ ಮಡಿವಾಳರ ಸಮುದಾಯ ಭವನದಲ್ಲಿ ತಾಲ್ಲೂಕು ಮಡಿವಾಳರ ಸಂಘದ (ರಿ.) ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯುವ ಮುಖಂಡರಾದ ದರ್ಶನ್ ಧ್ರುವನಾರಾಯಣ್ ಅವರು, ಕರ್ನಾಟಕ ರಾಜ್ಯ ಮಡಿವಾಳ ಮಾಚಿ ದೇವರ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ. ನಂಜಪ್ಪ ಅವರಿಗೆ ಮಡಿವಾಳ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ 2026-27ನೇ ಸಾಲಿನ ಸಂಘದ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ, ನೆರೆದಿದ್ದ ಸಮಾಜದ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ಜಯಂತಿ ಪೂರ್ವಭಾವಿ ಸಭೆ: ಕ್ಯಾಲೆಂಡರ್ ಬಿಡುಗಡೆಯ ಜೊತೆಗೆ ಸಂಘದ ವಾರ್ಷಿಕ ಮಹಾಸಭೆ ಹಾಗೂ ಮುಂಬರುವ ಮಡಿವಾಳ ಮಾಚಿ ದೇವರ ಜಯಂತಿಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಮಾಜದ ಸಂಘಟನೆಯೊಂದಿಗೆ ಆಚರಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರಣ್ಣ, ಧರ್ಮರಾಜ್, ಜೈರಾಮ್, ಮಹೇಶ್, ಬಸವರಾಜ್, ದೇಬೂರು ಅಶೋಕ್, ಧರ್ಮೇಶ್, ಮಹದೇವಸ್ವಾಮಿ, ಮಹದೇವು, ಪ್ರಸನ್ನ ಕುಮಾರ್, ನಂಜುಂಡಯ್ಯ, ಶಿವಣ್ಣ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ವಿವಿಧ ಗ್ರಾಮಗಳ ಯಜಮಾನರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







