ದೆಹಲಿ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಗೊರಲತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿಮಾನದ ಮೂಲಕ ದೆಹಲಿಗೆ ಪ್ರವಾಸ ಕೈಗೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದೆಹಲಿಗೆ ಆಗಮಿಸಿದ ಮಕ್ಕಳನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ, ಮಕ್ಕಳೊಂದಿಗೆ ಉಪಹಾರ ಸೇವಿಸಿ ಸಂಭ್ರಮಿಸಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ದೇಶದ ರಾಜಧಾನಿಯನ್ನು ನೋಡುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಪ್ರವಾಸಕ್ಕೆ ಕೇಂದ್ರ ಸಚಿವರು ಸಂಪೂರ್ಣ ಬೆಂಬಲ ನೀಡಿದ್ದಾರೆ.
ಸಚಿವರ ಉದಾರತೆ: ಮೂರು ದಿನಗಳ ಈ ದೆಹಲಿ ಪ್ರವಾಸದ ವೇಳೆ ಮಕ್ಕಳ ಬಸ್ ಪ್ರಯಾಣ, ವಸತಿ ಹಾಗೂ ಊಟೋಪಚಾರದ ಸಂಪೂರ್ಣ ವೆಚ್ಚವನ್ನು ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಭರಿಸುವ ಮೂಲಕ ಮಕ್ಕಳ ಕನಸಿಗೆ ಆಸರೆಯಾಗಿದ್ದಾರೆ.
ಮಕ್ಕಳೊಂದಿಗೆ ಸಂವಾದ: ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮಕ್ಕಳೊಂದಿಗೆ ಕುಳಿತ ಸಚಿವರು, ಆತ್ಮೀಯವಾಗಿ ಹರಟೆ ಹೊಡೆಯುತ್ತಾ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಮಾಹಿತಿ ಪಡೆದು ಶುಭ ಹಾರೈಸಿದರು.
ವಿಮಾನ ಯಾನದ ಅನುಭವ: ಮೊದಲ ಬಾರಿಗೆ ವಿಮಾನವೇರಿ ದೆಹಲಿಗೆ ಬಂದ ಸರ್ಕಾರಿ ಶಾಲಾ ಮಕ್ಕಳ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು. ಈ ಪ್ರವಾಸವು ಅವರ ಜ್ಞಾನಾರ್ಜನೆಗೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಪೂರಕವಾಗಿದೆ.
ಈ ಅಭೂತಪೂರ್ವ ಪ್ರವಾಸಕ್ಕೆ ಕಾರಣಕರ್ತರಾದ ಚಳ್ಳಕೆರೆ ತಾಲ್ಲೂಕಿನ ಜೆಡಿಎಸ್ ಯುವ ನಾಯಕರಾದ ರವೀಶ್ ಕುಮಾರ್, ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಲೆಯ ಶಿಕ್ಷಕ ವರ್ಗಕ್ಕೆ ಗ್ರಾಮಸ್ಥರು ಮತ್ತು ಪೋಷಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಗ್ರಾಮೀಣ ಭಾಗದ ಶಾಲಾ ಮಕ್ಕಳ ಬದುಕಿನಲ್ಲಿ ಇದೊಂದು ಮರೆಯಲಾಗದ ಸವಿನೆನಪಾಗಿ ಉಳಿಯಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.







