ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾವಿತ ‘ಮಲೆಯಾಳಿ ಭಾಷಾ ಮಸೂದೆ-2025’ ಸಂವಿಧಾನಬದ್ಧ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದ್ದು, ಇದನ್ನು ತಕ್ಷಣವೇ ಕೈಬಿಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಸೂದೆಯ ಜಾರಿಯಿಂದ ಕಾಸರಗೋಡು ಸೇರಿದಂತೆ ಗಡಿ ಜಿಲ್ಲೆಗಳ ಕನ್ನಡಿಗರಿಗೆ ಆಗಲಿರುವ ಅನ್ಯಾಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಕಟಣೆಯ ಮುಖ್ಯಾಂಶಗಳು ಇಲ್ಲಿವೆ:
ಸಂವಿಧಾನದ ಆಶಯಕ್ಕೆ ಧಕ್ಕೆ: ಸಂವಿಧಾನದ ಪರಿಚ್ಛೇದ 29, 30 ಮತ್ತು 350(A) ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಭಾಷಾ ಹಕ್ಕುಗಳನ್ನು ಈ ಮಸೂದೆ ಕಸಿದುಕೊಳ್ಳುತ್ತಿದೆ. ಮಾತೃಭಾಷೆಯಲ್ಲಿ ಕಲಿಯುವುದು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ.
ಕಾಸರಗೋಡು ಕನ್ನಡಿಗರ ಅಸ್ಮಿತೆ: ಕಾಸರಗೋಡು ಆಡಳಿತಾತ್ಮಕವಾಗಿ ಕೇರಳದಲ್ಲಿದ್ದರೂ, ಸಾಂಸ್ಕೃತಿಕವಾಗಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಶೇ. 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮವನ್ನೇ ಬಯಸುತ್ತಿದ್ದು, ಅವರ ಮೇಲೆ ಅನ್ಯಭಾಷೆ ಹೇರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮ: ಮಕ್ಕಳು ಮಾತೃಭಾಷೆಯಲ್ಲಿ ವಿಷಯಗಳನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬಲವಂತದ ಭಾಷಾ ಹೇರಿಕೆಯು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.
ಬಹುತ್ವದ ರಕ್ಷಣೆ: ಭಾರತವು ಬಹುಸಂಸ್ಕೃತಿಯ ದೇಶವಾಗಿದೆ. ಕೇರಳ ಸರ್ಕಾರವು ಮಲೆಯಾಳಂ ಭಾಷೆಯನ್ನು ಪೋಷಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದು ಕನ್ನಡ ಭಾಷೆಯ ಅವಸಾನಕ್ಕೆ ಕಾರಣವಾಗಬಾರದು.
“ಕಾಸರಗೋಡಿನ ಕನ್ನಡಿಗರು ನಮ್ಮವರೇ. ಅವರ ಹಿತರಕ್ಷಣೆ ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಕೇರಳ ಸರ್ಕಾರವು ಈ ಕೂಡಲೇ ಮಸೂದೆಯನ್ನು ಮರುಪರಿಶೀಲಿಸಬೇಕು. ಒಂದು ವೇಳೆ ಕನ್ನಡಿಗರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮುಂದುವರೆದರೆ, ಕರ್ನಾಟಕ ಸರ್ಕಾರವು ಕಾಸರಗೋಡಿನ ಕನ್ನಡಿಗರ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ” ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದ್ದಾರೆ.







