ನವದೆಹಲಿ: ಬಳ್ಳಾರಿಯಲ್ಲಿ ಉಪಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪೊಲೀಸ್ ಅಧಿಕಾರಿಗಳ ಸಭೆ ನಡೆಸಲು ಡಿಸಿಎಂಗೆ ಅಧಿಕಾರ ಕೊಟ್ಟವರು ಯಾರು? ರಾಜ್ಯದಲ್ಲಿ ಗೃಹ ಸಚಿವರು ಕೇವಲ ರಬ್ಬರ್ ಸ್ಟ್ಯಾಂಪ್ ಅಥವಾ ಹೆಬ್ಬೆಟ್ಟು ಸಚಿವರಾ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಘಟನೆ ಮತ್ತು ಸರ್ಕಾರದ ನಡೆಗಳ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಕುಮಾರಸ್ವಾಮಿ ಎತ್ತಿದ ಪ್ರಮುಖ ಪ್ರಶ್ನೆಗಳು:
ಡಿಸಿಎಂ ಅಧಿಕಾರ ವ್ಯಾಪ್ತಿ: “ಡಿಸಿಎಂ ಎಂದರೆ ಕೇವಲ ಒಬ್ಬ ಮಂತ್ರಿ ಅಷ್ಟೇ. ಅವರಿಗೆ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲು ಯಾವ ಕಾನೂನು ಅವಕಾಶ ನೀಡಿದೆ? ಗೃಹ ಸಚಿವರ ಅನುಪಸ್ಥಿತಿಯಲ್ಲಿ ಇವರೇಕೆ ಸಭೆ ನಡೆಸಬೇಕು?”
ಪ್ರಕರಣ ಮುಚ್ಚಿ ಹಾಕುವ ಯತ್ನ: ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸುವ ಹಂತಕ್ಕೆ ಪರಿಸ್ಥಿತಿ ತಲುಪಿದೆ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅಂತಿಮ ಸಂಸ್ಕಾರದ ಗಡಿಬಿಡಿ: “ಮರಣೋತ್ತರ ಪರೀಕ್ಷೆ ಮುಗಿದ ತಕ್ಷಣ ಕುಟುಂಬದವರಿಗೆ ಅಂತಿಮ ವಿಧಿವಿಧಾನಕ್ಕೂ ಅವಕಾಶ ನೀಡದೆ, ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿದ್ದು ಯಾಕೆ? ಸರ್ಕಾರ ಯಾವುದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ?” ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವಿರುದ್ಧ ವ್ಯಂಗ್ಯ
ಕಾಂಗ್ರೆಸ್ ಪಕ್ಷವು ಬಳ್ಳಾರಿಗೆ ಕಳುಹಿಸಿರುವ ಸತ್ಯಶೋಧನಾ ಸಮಿತಿಯ ಬಗ್ಗೆಯೂ ಲೇವಡಿ ಮಾಡಿದ ಕುಮಾರಸ್ವಾಮಿ, “ಅಲ್ಲಿನ ಕಾರ್ಯಕರ್ತರೇ ಕಾಂಗ್ರೆಸ್ ಶಾಸಕರ ವಿರುದ್ಧ ದೂರು ನೀಡುತ್ತಿದ್ದಾರೆ. ಇನ್ನು ಸಮಿತಿ ಯಾವ ಸತ್ಯವನ್ನು ಹೊರಗೆಳೆಯುತ್ತದೆ? ಕಾಂಗ್ರೆಸ್ಸಿಗರು ಸತ್ಯವನ್ನೇ ಹೇಳುತ್ತಾರೆ ಎಂದಾದರೆ, ಈ ಸಮಿತಿಯ ವರದಿ ಜನರ ಮುಂದೆ ಬರಲಿ,” ಎಂದರು.
ಹಳೆಯ ವೈಷಮ್ಯ ಮತ್ತು ವಿಶ್ವಾಸದ್ರೋಹದ ಸ್ಮರಣೆ
ಜನಾರ್ದನ ರೆಡ್ಡಿ ಅವರೊಂದಿಗೆ ತಮಗಿದ್ದ ಹಳೆಯ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದು ಹಳೆಯ ಕಥೆ. ನಾನು ಯಾವುದೇ ರಾಗದ್ವೇಷವಿಲ್ಲದೆ ಸತ್ಯ ಮಾತನಾಡುತ್ತಿದ್ದೇನೆ. ಹಿಂದೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ‘ಜೋಡೆತ್ತು’ ಎಂದವರು ನಂತರ ಬೆನ್ನಿಗೆ ಚೂರಿ ಹಾಕಿ ವಿಶ್ವಾಸದ್ರೋಹ ಮಾಡಿದರು,” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.







