ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಿಗಾಗಿ ನಾಳೆ ರಾತ್ರಿಯಿಂದಲೇ ಭದ್ರಾ ಎಡದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಿದೆ.
ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ಕಚೇರಿಯಲ್ಲಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 88ನೇ ನೀರಾವರಿ ಸಲಹಾ ಸಮಿತಿ (ICC) ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ನೀರು ಹರಿಸುವ ವೇಳಾಪಟ್ಟಿ:
ರೈತ ಮುಖಂಡರ ಸಲಹೆ ಹಾಗೂ ಬೆಳೆಗಳ ಅಗತ್ಯವನ್ನು ಪರಿಗಣಿಸಿ ಸಚಿವರು ಈ ಕೆಳಗಿನಂತೆ ಸೂಚನೆ ನೀಡಿದ್ದಾರೆ:
- ಎಡದಂಡೆ ಕಾಲುವೆ: ಜನವರಿ 03ರ ನಾಳೆ ರಾತ್ರಿಯಿಂದಲೇ ನೀರು ಬಿಡುಗಡೆ.
- ಬಲದಂಡೆ ಕಾಲುವೆ: ಜನವರಿ 08ರಿಂದ ನೀರು ಹರಿಸಲು ಕ್ರಮ.
ರೈತಪರ ನಿಲುವು ತಳೆದ ಸಚಿವರು:
ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಈಗಾಗಲೇ ರೈತರು ಬೇಸಿಗೆ ಹಂಗಾಮಿನ ಕೃಷಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ರೈತರ ಹಿತದೃಷ್ಟಿಯಿಂದ ಹಾಗೂ ಅಚ್ಚುಕಟ್ಟು ಪ್ರದೇಶದ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರೈತ ಮುಖಂಡರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ,” ಎಂದು ತಿಳಿಸಿದರು.
ಸಮರ್ಪಕವಾಗಿ ನೀರು ನಿರ್ವಹಣೆ ಮಾಡಲು ಮತ್ತು ಕಟ್ಟಕಡೆಯ ರೈತನಿಗೂ ನೀರು ತಲುಪುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಪ್ರಮುಖ ಸಭೆಯಲ್ಲಿ ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಂಶುಮಂತ್, ಶಾಸಕರುಗಳಾದ ಶ್ರೀ ಚನ್ನಬಸಪ್ಪ (ಚನ್ನಿ), ಶ್ರೀ ಡಿ.ಜಿ. ಶಾಂತನಗೌಡ್ರು, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಬಿ. ನಿಖಿಲ್ ಉಪಸ್ಥಿತರಿದ್ದರು. ರೈತ ಮುಖಂಡರಾದ ಹೆಚ್.ಆರ್. ಬಸವರಾಜಪ್ಪ, ಶ್ರೀ ತೇಜಸ್ವಿ ಪಟೇಲ್ ಸೇರಿದಂತೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ರೈತ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು.







