ಬೆಂಗಳೂರು: ಗ್ರಾಮೀಣ ಭಾಗದ ಆಸ್ತಿ ಮಾಲೀಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇ-ಸ್ವತ್ತು ತಂತ್ರಾಂಶದಲ್ಲಿ ಮಹತ್ವದ ಸುಧಾರಣೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ಖಾತೆ ಪಡೆಯಲು ಗ್ರಾಮ ಪಂಚಾಯಿತಿಗಳಿಗೆ ಅಲೆಯುವ ಪದ್ಧತಿಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ.
11ಬಿ ಖಾತೆಗಳ ಪರಿವರ್ತನೆಗೆ ಸಚಿವರಿಂದ ಹಸಿರು ನಿಶಾನೆ
ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ-11ಬಿ ಖಾತೆಗಳನ್ನು ಎರಡು ವಾರಗಳ ಕಾಲಾವಧಿಯಲ್ಲಿ ನಮೂನೆ-11ಎ ಖಾತೆಗಳನ್ನಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡಲಾಗುವುದು. ಸಾರ್ವಜನಿಕರ ಆಸ್ತಿ ಹಕ್ಕುಗಳನ್ನು ಭದ್ರಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ತಿಳಿಸಿದ್ದಾರೆ.
ಹೊಸ ಬಡಾವಣೆ ಹಾಗೂ ಅಪಾರ್ಟ್ಮೆಂಟ್ಗಳಿಗೆ ಸಿಹಿ ಸುದ್ದಿ
ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ವಲಯದ ಬೇಡಿಕೆಯಂತೆ, ಹೊಸ ಬಡಾವಣೆಗಳು (Layouts) ಹಾಗೂ ಬಹುಮಹಡಿ (ಅಪಾರ್ಟ್ಮೆಂಟ್) ಕಟ್ಟಡಗಳಿಗೆ ಅರ್ಜಿ ಸಲ್ಲಿಸಲು ಮುಂದಿನ ಒಂದು ತಿಂಗಳೊಳಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡ ಪ್ರಮುಖ ಮಾಹಿತಿಗಳು:
ನಾಗರಿಕ ಸ್ನೇಹಿ ವ್ಯವಸ್ಥೆ: “ಇ-ಸ್ವತ್ತು ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಲು ನಮ್ಮ ಇಲಾಖೆ ಬದ್ಧವಾಗಿದೆ. ತಂತ್ರಾಂಶದಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ, ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ,” ಎಂದು ಸಚಿವರು ತಿಳಿಸಿದರು.
ಮನೆ ಬಾಗಿಲಿಗೇ ಸೇವೆ: ಸಾರ್ವಜನಿಕರು ಈಗ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಆನ್ಲೈನ್ ಮೂಲಕವೇ ತೆರಿಗೆ ಮತ್ತು ಪ್ರಿಂಟಿಂಗ್ ಶುಲ್ಕ ಪಾವತಿಸಿ, ತಮ್ಮ ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅರ್ಜಿಗಳ ವಿಲೇವಾರಿ: ಈಗಾಗಲೇ ಆನ್ಲೈನ್ ಮೂಲಕ ಬಂದಿರುವ 21,429 ಅರ್ಜಿಗಳ ಅನುಮೋದನೆ ಪ್ರಕ್ರಿಯೆಯು ಜನವರಿ 01 ರಿಂದಲೇ ಆರಂಭಗೊಂಡಿದ್ದು, ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಯಾವುದೇ ಗಡುವು ಇಲ್ಲ: ಇ-ಸ್ವತ್ತು ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಹಾಯಕ್ಕಾಗಿ ಜಿಲ್ಲಾ ಸಹಾಯವಾಣಿ ಬಳಸಿ
“ಜನರ ಗೊಂದಲ ಮತ್ತು ಸಂದೇಹಗಳನ್ನು ಬಗೆಹರಿಸಲು ನಾವು ಬದ್ಧರಿದ್ದೇವೆ. ತಂತ್ರಾಂಶ ಬಳಕೆಯಲ್ಲಿ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ತಮ್ಮ ಜಿಲ್ಲೆಯ ಸಹಾಯವಾಣಿಗೆ ಕರೆ ಮಾಡಬಹುದು,” ಎಂದು ಸಚಿವ ಖರ್ಗೆ ಅವರು ಮನವಿ ಮಾಡಿದ್ದಾರೆ.
- ಅಧಿಕೃತ ಪೋರ್ಟಲ್ಗಳು: 1. eswathu.karnataka.gov.in 2. panchatantra.karnataka.gov.in







