ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ, ಈಗಾಗಲೇ ಅರ್ಹ ನೌಕರರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ವರ್ಗಾವಣೆ ಬಯಸುವವರಿಗೆ ಹೊಸ ವರ್ಷ 2026ಕ್ಕೆ ಗುಡ್ ನ್ಯೂಸ್ ನೀಡಿದ್ದು, ಜನವರಿ 1ರಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರದ ಟಿಡಿ 45 ಟಿಸಿಎಸ್ 2020 ಅಡಿ 2021 ಮಾರ್ಚ್ 23 ಮತ್ತು 2025ರ ಜನವರಿಯಂದು 18ರಂದು ಹೊರಡಿಸಿದ ಆದೇಶದ ಅನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMT), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ನಿಗಮಗಳ ದರ್ಜೆ 3 ಮೇಲ್ವಿಚಾರಕರು ಹಾಗೂ ದರ್ಜೆ 4ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರ ಸಾರಿಗೆ ನೌಕರರ ವರ್ಗಾವಣೆ ಎರಡು ಆದೇಶಗಳ ಮೂಲಕ ನಿರ್ದೇಶನಗಳನ್ನು ನೀಡಿತ್ತು. ಅದರನ್ವಯ 2026ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಹೊಸ ವರ್ಷದ ಮೊದಲ ದಿನ ಜನವರಿ 01ರಿಂದಲೇ ಆರಂಭವಾಗುತ್ತಿದೆ. ಗುರುವಾರ ಬೆಳಗ್ಗೆ 11:00 ಗಂಟೆಯಿಂದ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿ, ಜನವರಿ 31ರ ಸಂಜೆ 5:30 ರವರೆಗೆ ನಡೆಯಲಿದೆ. ಅರ್ಹ ನೌಕರರು ಆನ್-ಲೈನ್ ಮೂಲಕ (ಅಧಿಕೃತ ಜಾಲತಾಣ www.ksrtc.org/transfer) ಸಾಮಾನ್ಯ ವರ್ಗಾವಣೆ, ಪತಿ-ಪತ್ನಿ/ ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು/ ತೀವ್ರತರಹದ ಅನಾರೋಗ್ಯ (ಹೆಚ್.ಐ.ವಿ, ಹೃದಯರೋಗ, ಕ್ಯಾನ್ಸರ್, ಸ್ಟೈನಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಬಂಧಿಸಿದ ಖಾಯಿಲೆಗಳು) ಹೊಂದಿರುವ ನೌಕರರು ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







