ಹಾಸನ: ಜೆಡಿಎಸ್ ಎನ್ಡಿಎ ಜತೆ ಇದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿ ಮನೆ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ರೇವಣ್ಣನವರ ಶಕ್ತಿ ಕುಂದಿಸಲು ಪಣ ತೊಟ್ಟಿರುವ ಹಾಗೆ ಕಾಣಿಸುತ್ತಿದೆ. ನಾನು ಈಗಾಗಲೇ ರೇವಣ್ಣಗೆ ಹೇಳಿದ್ದೇನೆ. ಈ ಜಿಲ್ಲೆಯಲ್ಲಿ ಯಾರು ಏನೇ ಸಭೆ ಮಾಡಿದರೂ ಅದಕ್ಕಿಂತ ಮೇಲ್ಮಟ್ಟದ ಸಭೆಯನ್ನು ಮಾಡಿ ಸಂದೇಶ ರವಾನಿಸಬೇಕು ಎಂದು ತಿಳಿಸಿದ್ದೇನೆ, ಎಂದರು.
”ಹಾಸನದ ಯಾವುದೇ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿ ನನಗೆ ದಿಗ್ಬಂಧನ ವಿಧಿಸಲು ಸಾಧ್ಯವಿಲ್ಲ. ರೇವಣ್ಣನ ಮುಗಿಸಲು ವ್ಯವಸ್ಥಿತವಾಗಿ ಹಾಸನದಲ್ಲಿ ಸಂಚು ನಡೆಯುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡನ ತೆಗೆದರು. ನಾನು ಪಿಎಂ ಆಗಬೇಕು ಅಂತ ಏನಾದರೂ ಅರ್ಜಿ ಹಾಕಿದ್ದೇನಾ. ದೈವಬಲದಿಂದ ಆಗಲಿಲ್ಲವೇ? ನಾನು ಅಧಿಕಾರಕ್ಕೆ ಅಂಟಿ ಕೂತ ವ್ಯಕ್ತಿಯಲ್ಲ. ಜನತೆಯ ಆಶೀರ್ವಾದದಿಂದ ಬದುಕಿದ್ದೇವೆ. ಇಂದು ನಮ್ಮ ಕುಲದೇವರಿಗೆ ಪೂಜೆ ಮಾಡಿದ್ದೇವೆ. ನಾವು ವಂಶ ಪಾರಂಪರ್ಯವಾಗಿ ಈಶ್ವರನ ಆರಾಧಕರು. 93 ವಯಸ್ಸಾದರೂ ಹೋರಾಟದ ಕೆಚ್ಚೆದೆ ಜನತೆ ಕೊಟ್ಟಿದ್ದು,” ಎಂದರು.
”ನಮ್ಮ ಆಡಳಿತದಲ್ಲಿ ಯಾವುದೇ ಸಮಾಜಕ್ಕೂ ಅನ್ಯಾಯವಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ನಮ್ಮ ಗುರಿ,” ಎಂದು ತಿಳಿಸಿದರು. ”ನನಗೆ ಈಗ 93 ವರ್ಷ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಆದರೆ ಹೋರಾಟ ನಿಲ್ಲದು. ನನ್ನ ಕಡೆಯ ಉಸಿರು ಇರುವ ತನಕ ಈ ಜಿಲ್ಲೆ ಮತ್ತು ಜನರಿಗಾಗಿ ಹೋರಾಡುತ್ತಲೇ ಇರುತ್ತೇನೆ,” ಎಂದರು.







